ಚಿಕ್ಕಮಗಳೂರು: ‘ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರದ ಜಿಲ್ಲಾ ಅಧ್ಯಕ್ಷ ಎಸ್.ಬಿ.ರಾಮಚಂದ್ರಪ್ಪ ಹೇಳಿದರು.
ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಚಿಕ್ಕಮಗಳೂರು ಶಾಖೆ ಸಹಯೋಗದಲ್ಲಿ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಯುವಜನ ಮೇಳದಲ್ಲಿ ಕೆಂಪೇಗೌಡ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನೇಲ್ಯಡ್ಕದ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಸಮಿತಿಯ ಗೋಪಾಲಸ್ವಾಮಿ ಅವರು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಶ್ರೀಗಂಧದ ಬೆಳೆಗಾರ ಶ್ರೀಗಂಧದ ಕೃಷ್ಣೇಗೌಡ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.
ಪತಂಜಲಿ ಜೆ. ನಾಗರಾಜ್ ಮಾತನಾಡಿ, ಪತಂಜಲಿ ಸಂಸ್ಥೆಯ 25ನೇ ವರ್ಷದ ಬೆಳ್ಳಿಹಬ್ಬ ಹಾಗೂ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಜಾನಪದ ಯುವಜನ ಮೇಳ ಏರ್ಪಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದೆ ಎಂದರು.
ಕೆಂಪೇಗೌಡ ಸದ್ಭಾವನಾ ಪ್ರಶಸ್ತಿ ಪ್ರದಾನ: ಶ್ರೀಗಂಧದ ಕೃಷ್ಣೇಗೌಡ, ಗೋಪಾಲಸ್ವಾಮಿ,ಇನ್ನರ್ವೀಲ್ ಕ್ಲಬ್ ಚಿಕ್ಕಮಗಳೂರು ಅಧ್ಯಕ್ಷೆ ಪ್ರನುಪ ನಾಗರಾಜ್ಸಹಿತ ಹಲವರಿಗೆ ಕೆಂಪೇಗೌಡ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯಮಟ್ಟದ ಜಾನಪದ ಯುವಜನ ಮೇಳದಲ್ಲಿ ವಿವಿಧೆಡೆಯ ಕಲಾ ತಂಡಗಳು ಪಾಲ್ಗೊಂಡಿದ್ದವು. ಪತಂಜಲಿ ಚಿಕ್ಕಮಗಳೂರು ಶ್ರೀಗಂಧದಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಿ.ಆರ್.ರಘು, ಈಶ್ವರಪ್ಪ ನವುಲೆ, ಲಕ್ಷ್ಮೀದೇವಮ್ಮ, ರೇಖಾ ಹುಲಿಯಪ್ಪಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ತೇಗೂರು ಜಗದೀಶ್, ಕನ್ನಡ ಸೇನೆಯ ಪಿ.ಸಿ.ರಾಜೇಗೌಡ, ಡಾ.ಕೆ.ಸುಂದರಗೌಡ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.