ADVERTISEMENT

ಗಾಯತ್ರಿ ಶಾಂತೇಗೌಡಗೆ ಜೆಡಿಎಸ್ ಬೆಂಬಲ: ವೈ.ಎಸ್.ವಿ.ದತ್ತ

ಸ್ಥಳೀಯ ನಾಯಕರ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 15:36 IST
Last Updated 28 ನವೆಂಬರ್ 2021, 15:36 IST
ಕಡೂರಿನಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಧಾನ ಪರಿಷತ್ ಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಇದ್ದಾರೆ.
ಕಡೂರಿನಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಧಾನ ಪರಿಷತ್ ಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಇದ್ದಾರೆ.   

ಕಡೂರು: ‘ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ ಜೆಡಿಎಸ್ ಪಕ್ಷ ಬೆಂಬಲಿಸುವ ನಿರ್ಧಾರವನ್ನು ಸ್ಥಳೀಯ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಪಟ್ಟಣದ ಟಿಡಿಎಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘12 ವರ್ಷಗಳ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷ ಕಾಂಗ್ರೆಸ್‌ ಬೆಂಬಲಿಸಿ ಆಗ ಗಾಯತ್ರಿ ಶಾಂತೇಗೌಡರು ವಿಜೇತರಾಗಿದ್ದರು. 2016ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೂ ಸ್ಪರ್ಧಿಸಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಜಾತ್ಯತೀತ ಮತ ವಿಭಜನೆಯಿಂದ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದರು. ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸಿಲ್ಲ. ರಾಜ್ಯದ ಆರು ಕಡೆ ನಮ್ಮ ಅಭ್ಯರ್ಥಿಗಳಿದ್ದಾರೆ. ಉಳಿದೆಡೆ ಜೆಡಿಎಸ್ ಪಕ್ಷ ಯಾರಿಗೆ ಬೆಂಬಲಿಸಬೇಕೆಂಬ ಸ್ಪಷ್ಟ ನಿರ್ಧಾರವನ್ನು ಪಕ್ಷ ವರಿಷ್ಠರು ತೆಗೆದುಕೊಂಡಿಲ್ಲ. ಆದರೆ, ಈ ಕ್ಷೇತ್ರದ ಮಟ್ಟಿಗೆ ಪಕ್ಷದ ಕಾರ್ಯಕರ್ತರು ತಾತ್ವಿಕ ನಿಲುವು ತೆಗೆದುಕೊಂಡಿದ್ದಾರೆ. ಪಕ್ಷದ ನಿಲುವು ಏನಿದ್ದರೂ ಜಾತ್ಯತೀತ ಶಕ್ತಿ ಗೆಲ್ಲಬೇಕು ಮತ್ತು ಕೋಮುವಾದಿ ಮನೋಭಾವದ ಪಕ್ಷ ಸೋಲಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಗಾಯತ್ರಿ ಶಾಂತೇಗೌಡರಿಗೆ ಬೆಂಬಲ ಘೋಷಿಸಲಾಗಿದೆ’ ಎಂದು ಪ್ರಕಟಿಸಿದರು.

ADVERTISEMENT

ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಜೆಡಿಎಸ್ ಪಕ್ಷದ ಬೆಂಬಲ ನಮಗೆ ಮತ್ತಷ್ಟು ಬಲ ಬಂದಿದೆ. ಚುನಾವಣೆಯಲ್ಲಿ ಗೆಲ್ಲುವ ಆತ್ಮಸ್ಥೈರ್ಯ ಹೆಚ್ಚಿದೆ’ ಎಂದರು.

ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ‘ಜಾತ್ಯತೀತ ಮನಸ್ಸುಗಳು ಒಂದಾಗಿರುವುದರಿಂದ ಗಾಯತ್ರಿ ಶಾಂತೇಗೌಡರ ಆಯ್ಕೆಯಾಗುವುದು ಖಚಿತ’ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯ ಮರುಗುದ್ದಿ ಮನು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಯರದಕೆರೆ ರಾಜಪ್ಪ, ಕಂಸಾಗರ ಶೇಖರಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರೇಂ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.