ADVERTISEMENT

ದ್ವೇಷ ಬೀಡಿ ಅಭಿವೃದ್ಧಿ ಮಾಡಿ: ಡಿ.ಎನ್. ಜೀವರಾಜ್ 

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 8:03 IST
Last Updated 3 ಜನವರಿ 2026, 8:03 IST
ಡಿ.ಎನ್ ಜೀವರಾಜ್
ಡಿ.ಎನ್ ಜೀವರಾಜ್   

ಶೃಂಗೇರಿ: ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತು ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ದ್ವೇಷ ಹಾಗೂ ಅಸೂಯೆ ರಾಜಕಾರಣ ಮಾತ್ರ ಮಾಡುತ್ತಿದ್ದಾರೆ, ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯ’ ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಾಂಧಿ ಮೈದಾನದಲ್ಲಿ 35 ವರ್ಷದಿಂದ ಇರುವ 33 ಅಂಗಡಿಗಳನ್ನು ತೆರವುಗೊಳಿಸಿದ ಕಾರಣ ಸ್ವಚ್ಛತೆಯಿಲ್ಲದೆ ಶೃಂಗೇರಿ ಕ್ಷೇತ್ರದ ಪಾವಿತ್ರ್ಯತೆಯನ್ನು ಶಾಸಕರು ಹಾಗೂ ಅಧಿಕಾರಿಗಳು ಹಾಳುಮಾಡಿದ್ದಾರೆ’ ಎಂದು ದೂರಿದರು.

‘ನ್ಯಾಯಾಲಯದಲ್ಲಿ ಅಂಗಡಿ ತೆರವು ಕುರಿತು ಪ್ರಕರಣ ಇತ್ಯರ್ಥವಾಗುವ ಮೊದಲು ತಮ್ಮ ಅಧಿಕಾರವನ್ನು ಬಳಸಿ, ಪಟ್ಟಣ ಪಂಚಾಯಿತಿಗೆ ಬರಬೇಕಾದ ₹90 ಲಕ್ಷ ಅನುದಾನ ತಡೆಹಿಡಿದಿದ್ದಾರೆ. ಆದೇಶದ ಪ್ರತಿ ಇಲ್ಲದೇ ಏಕಾಏಕಿ ಪೊಲೀಸ್ ಬಂದೋಬಸ್ತಿನಲ್ಲಿ ಅಂಗಡಿಗಳನ್ನು ತೆರವುಗೊಳಿಸಿ, ಜನರ ಬದುಕನ್ನು ಬೀದಿಗೆ ತಳ್ಳಿದ್ದಾರೆ’ ಎಂದರು.

ADVERTISEMENT

ಎಲೆಚುಕ್ಕಿ ರೋಗ ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಡಿದೆ. ಅತಿಯಾದ ಮಳೆ ಬಂದು ರೈತರು ಬೆಳೆ ಕಳೆದುಕೊಂಡರೂ ಶೃಂಗೇರಿ ಕ್ಷೇತ್ರವನ್ನು ಅತಿವೃಷ್ಟಿ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡದ ಕಾರಣ ರೈತರಿಗೆ ಸರ್ಕಾರದ ನೆರವು ಸಿಗದಂತಾಗಿದೆ. ಕ್ಷೇತ್ರದ ಎಲ್ಲಾ ರಸ್ತೆಗಳ ಕಾಮಗಾರಿ ಕಳಪೆಯಾಗಿವೆ. ಪಟ್ಟಣಕ್ಕೆ ಸಮೀಪ ಕೆಎಸ್‍ಆರ್‌ಟಿಸಿ ಡಿಪೊ ಮಾಡಿದ್ದರೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಪ್ರಸ್ತುತ 100 ಹಾಸಿಗೆ ಆಸ್ಪತ್ರೆ ಹಾಗೂ ಬಸ್ ಡಿಪೊ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ರಾಜ್ಯದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ಸ್ಥಿತಿ-ಗತಿಗಳ ಕುರಿತು ಆಯಾ ಪ್ರದೇಶದ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅಧಿಕಾರಿಗಳಿಂದ ನೈಜವಾದ ವರದಿ ಕೇಂದ್ರ ಸರ್ಕಾರಕ್ಕೆ ತಲುಪುತ್ತಿಲ್ಲ. ಕರ್ತವ್ಯವನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸಬೇಕು. ಅವರಲ್ಲಿ ಜನಪರ ಕಾಳಜಿ ಇರಬೇಕು ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ವೇಣುಗೋಪಾಲ್, ನೂತನ್ ಕುಮಾರ್, ವಕ್ತಾರ ದಿನೇಶ್ ಅಂಗುರ್ಡಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ರತ್ನಾಕರ್, ಅಡ್ಡಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡ ಗೇರ್‍ಬೈಲ್ ಶಂಕರಪ್ಪ, ವಿಜಯ ತಿಪನಮಕ್ಕಿ, ಪ್ರಸನ್ನ ಬೇಗಾನೆ, ಪ್ರವೀಣ್ ಬಳ್ಳಿವಾಡ, ವೆಂಕಟೇಶ್, ದಿವೀರ್ ಮಲ್ನಾಡ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.