ಕಡೂರು: 'ಹೆತ್ತ ತಾಯಿಯನ್ನು ರಕ್ಷಿಸುವಂತೆ ಹೊತ್ತ ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು" ಎಂದು ಚಿಂತಕ ಚಟ್ನಳ್ಳಿ ಮಹೇಶ್ ತಿಳಿಸಿದರು.
ಕೃಷಿ ಇಲಾಖೆ, ಅರಿವಿನ ಮನೆ ಮತ್ತು ತಾಲ್ಲೂಕು ಕೃಷಿಕ ಸಮಾಜ ಕಡೂರಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಮಣ್ಣಿನ ದಿನ ಕಾರ್ಯಕ್ರಮದಲ್ಲಿ ಮಣ್ಣಿನ ಸಂರಕ್ಷಣೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು.
'ಮನುಷ್ಯ ಸತ್ತರೆ ಮಣ್ಣಿಗೇ ಹೋಗಬೇಕು. ಆದರೆ, ಮಣ್ಣು ಸತ್ತರೆ ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಮಣ್ಣಿನ ಮೇಲಿನ ದೌರ್ಜನ್ಯವನ್ನು ನಾವು ತಡೆಗಟ್ಟದಿದ್ದರೆ ನಮ್ಮೆಲ್ಲರ ಬದುಕು ದುರ್ಭರವಾಗುವುದು ಖಂಡಿತ’ ಎಂದರು.
‘ರೈತರೇ ನೆಲದೊಡೆಯರು ಮತ್ತು ಭೂ ಸಂರಕ್ಷಕರು. ಎಣ್ಣೆಗಾಗಿ, ಡೀಸೆಲ್, ಪೆಟ್ರೋಲ್, ಲೋಹ,, ಬಂಗಲೆ, ಮಹಲ್, ಮಾರ್ಬಲ್, ಗ್ರಾನೈಟ್, ರಿಯಲ್ ಎಸ್ಟೇಟ್, ಇಂತಹ ಜನ ವಿರೋಧಿ ಮಾಫಿಯಾಗಳು ಹಾಗು ಕಾಡು ಕಡಿದು ಕಾಂಕ್ರೀಟ್ ಕಾಡು ಕಟ್ಟುವ ಮರಗಳ್ಳರು ಮತ್ತು ಭೂ ಗಳ್ಳರಿಂದ ಭೂತಾಯಿ ನೊಂದು ನಲುಗಿ ಹೋಗಿದ್ದಾಳೆ.ಈ ಎಲ್ಲ ಅಪಾಯಗಳಿಂದ ಭೂಮಿಯನ್ನು ಸಂರಕ್ಷಿಸುವ ಪಣವನ್ನು ತೊಟ್ಟು ಅದರ ಮೂಲಕ ಮಣ್ಣಿನ ರಕ್ಷಣೆ ಮಾಡೋಣ’ ಎಂದು ಕರೆ ನೀಡಿದರು.
ಅರಿವಿನ ಮನೆ ಅಧ್ಯಕ್ಷ ಈಶಣ್ಣ, ಉದ್ಯಮಿ ನಾಗಭೂಷಣ್ , ಗಾಯಕ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.