ADVERTISEMENT

ಕಡೂರು | ಜಂಗಮರ ಅಸ್ಮಿತೆ ಉಳಿಯಲಿ: ರುದ್ರಮುನಿ ಶ್ರೀ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:20 IST
Last Updated 2 ಫೆಬ್ರುವರಿ 2026, 2:20 IST
ಕಡೂರು ತಾಲೂಕು ಬೇಡ ಜಂಗಮ ಸಮಾಜವು ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸೇವಾದೀಕ್ಷಾ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ಎ.ಪಿ. ಷಡ್ಜಯ್ ಅವರನ್ನು ಸನ್ಮಾನಿಸಲಾಯಿತು. ಎಂ.ಎಚ್. ಪ್ರಕಾಶಮೂರ್ತಿ, ಲೋಕೇಶ್, ರೇಣುಕಾರಾಧ್ಯ ಭಾಗವಹಿಸಿದ್ದರು
ಕಡೂರು ತಾಲೂಕು ಬೇಡ ಜಂಗಮ ಸಮಾಜವು ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸೇವಾದೀಕ್ಷಾ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಸಾಧನೆ ಮಾಡಿದ ಎ.ಪಿ. ಷಡ್ಜಯ್ ಅವರನ್ನು ಸನ್ಮಾನಿಸಲಾಯಿತು. ಎಂ.ಎಚ್. ಪ್ರಕಾಶಮೂರ್ತಿ, ಲೋಕೇಶ್, ರೇಣುಕಾರಾಧ್ಯ ಭಾಗವಹಿಸಿದ್ದರು   

ಕಡೂರು: ‘ಆಚಾರ–ವಿಚಾರ, ಪರಂಪರೆ ಹಾಗೂ ದಾಸೋಹ ವ್ಯವಸ್ಥೆಯನ್ನು ಜಂಗಮರು ಇಂದಿಗೂ ಆಚರಿಸುತ್ತಾ ಬಂದಿದ್ದು, ಅವರ ಅಸ್ಮಿತೆ ಉಳಿಯಬೇಕು’ ಎಂದು ಬೀರೂರಿನ ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಡೂರು ತಾಲ್ಲೂಕು ಬೇಡಜಂಗಮ ಸಮಾಜವು ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸೇವಾದೀಕ್ಷಾ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.

ಜಂಗಮ ಶಕ್ತಿ ಎಂದಿಗೂ ಜಗದ ಕಲ್ಯಾಣವನ್ನೇ ಬಯಸಿದೆ. ಜಂಗಮರು ತಮ್ಮ ಅಸ್ಮಿತೆ ಉಳಿಸಿಕೊಳ್ಳುವ ಪ್ರಯತ್ನದ ಫಲವಾಗಿಯೇ ಇಂದಿಗೂ ಪೂಜನೀಯ ಸ್ಥಾನದಲ್ಲಿ ಇದ್ದಾರೆ. ಆದಿಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪನೆ ಮಾಡಿ ಪಂಚಪೀಠ, ಪಂಚ ಆಚಾರ್ಯರನ್ನು ಸ್ಥಾಪಿಸಿದ್ದು, ತಲ ತಲಾಂತರದಿಂದ ಜಂಗಮರ ಮಾರ್ಗದರ್ಶನ ಸಮಾಜಕ್ಕೆ ದೊರೆತಿದೆ. ನಮ್ಮನ್ನು ಗೌರವಿಸುವ ಕುಲ 18 ಜಾತಿಗಳಿಗೂ ನಮ್ಮಿಂದ ಸಂಸ್ಕಾರ, ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರೆ ತಪ್ಪಾಗಲಾರದು. ಆದರೆ, ನಮ್ಮ ಸಮಾಜವು ಒಗ್ಗಟ್ಟಿನ ಕೊರತೆಯಿಂದ ಆಚಾರ–ವಿಚಾರದಿಂದ ದೂರ ಸರಿಯುತ್ತಿರುವುದು ವಿಷಾದಕರ. ನಮ್ಮ ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ‘ಜಂಗಮರು ಬಹುಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೆ ಸಂಕಷ್ಟದ ದಿನಗಳನ್ನು ಅನುಭವಿಸಿದ್ದಾರೆ. ಇತ್ತೀಚೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಚಿತ ವಿದ್ಯಾರ್ಥಿನಿಲಯ ಸ್ಥಾಪನೆಗೆ, ಸಮಾಜದ ಅಭಿವೃದ್ಧಿಗೆ ನಿವೇಶನ ನೀಡಲು ಮುಂದಾದರೆ ತಾವೂ ನೆರವು ನೀಡುವುದಾಗಿ’ ಭರವಸೆ ನೀಡಿದರು.

ರೇಣುಕಾಚಾರ್ಯರ ಭಾವಚಿತ್ರವನ್ನು ಅನಾವರಣ ಮಾಡಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ, ‘ಸಮಾಜದ ಅನೇಕ ಹಿರಿಯರ ಆಶೀರ್ವಾದ–ಸಹಕಾರದಿಂದ ಸಮಾಜವು ಮುನ್ನಡೆಯುತ್ತಿದ್ದು, ನೂತನ ಅಧ್ಯಕ್ಷರನ್ನಾಗಿ ನಿವೃತ್ತ ಅಧಿಕಾರಿ ಪ್ರಕಾಶಮೂರ್ತಿ ಅವರನ್ನು ಸಮಾಜದ ಬಂಧುಗಳು ಆಯ್ಕೆ ಮಾಡಿದ್ದಾರೆ. ಅವರು ಸಮಾಜ ಕಟ್ಟುವ ಕೆಲಸವನ್ನು ಯುವಕರು, ನಿರ್ದೇಶಕರ ಸಹಕಾರದೊಂದಿಗೆ ಮುನ್ನಡೆಸಲಿ. ಸಮಾಜವು ಬಯಸಿದರೆ ಸಮುದಾಯದ ಏಳಿಗೆಗಾಗಿ ಕಡಿಮೆ ದರದಲ್ಲಿ ತಮ್ಮಲ್ಲಿರುವ ನಿವೇಶನವನ್ನು ನೀಡಲು ಸಿದ್ಧನಿದ್ದೇನೆ’ ಎಂದರು.

ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷ ಘನಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಪಿ. ನಂಜುಂಡಾರಾಧ್ಯ ಅವರು, ಸಮಾಜ ಬೆಳೆದು ಬಂದ ಹಾದಿ ಮತ್ತು ಮುನ್ನಡೆಸುವ ಬಗ್ಗೆ ಮಾತನಾಡಿದರು. ವೀರಶೈವ-ಜಂಗಮ ಸಮಾಜದ ಹಿರಿಯರಾದ ಬೀರೂರಿನ ಪತ್ರೆ ಶೈಲಜಾ ಸದಾಶಿವನ್‌ ಅವರು, ಮಕ್ಕಳ ಪ್ರತಿಭೆಯ ಬಗ್ಗೆ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ. ಸಿ.ಎಂ. ಸುಲೋಚನಾ ಉಪನ್ಯಾಸ ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸಿ, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿ ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶ ಪಡೆದಿರುವ ಎ.ಜೆ. ಪ್ರಕಾಶಮೂರ್ತಿ ಮತ್ತು ಶಿಕ್ಷಕಿ ಉಷಾ ಅವರ ಪುತ್ರ ಎ.ಪಿ. ಷಡ್ಜಯ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಬೀರೂರು ಮರುಳಸಿದ್ದಾರಾಧ್ಯ, ಎಂ.ಎಸ್. ಮರುಳಾರಾಧ್ಯ, ಪ್ರೇಮಕುಮಾರ್‌ ಪಿ.ಆರ್., ಜಿ.ಎಂ. ಯತೀಶ್, ಶಿಕ್ಷಕ ಸಂಪತ್‌ಕುಮಾರ್, ವೈ.ಜಿ. ರುದ್ರಯ್ಯ, ಶಿವಲಿಂಗಸ್ವಾಮಿ, ಬಿ.ಸಿ. ಫಾಲಾಕ್ಷ. ಎ.ಎಂ. ಓಂಕಾರಮೂರ್ತಿ, ಭಾನುಪ್ರಕಾಶ್, ಅನಿತಾ, ಉಷಾ, ಮಮತಾ ಇದ್ದರು.

ಸಮುದಾಯದ ಸಂಘಟನೆಗೆ ಒತ್ತು

‘ಸಮುದಾಯದ ಸಂಘಟನೆಗೆ ಒತ್ತು ನೀಡಲಾಗುವುದು. ಪಟ್ಟಣದ ಯಾವುದಾದರು ವೃತ್ತಕ್ಕೆ ಶ್ರೀರೇಣುಕಾಚಾರ್ಯ ವೃತ್ತ ಎಂದು ನಾಮಕರಣ ಮಾಡಲು ಶಾಸಕರು ಮತ್ತು ಪುರಸಭೆಗೆ ಮನವಿ ಮಾಡಲಾಗಿದೆ. ನಿವೇಶನ ಹೊಂದಲೂ ಈಗಾಗಲೇ ಪ್ರಯತ್ನಗಳು ನಡೆದಿವೆ. ತಾಲ್ಲೂಕಿನಲ್ಲಿ 6ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಜಂಗಮ ಸಮಾಜವನ್ನು ಒಗ್ಗೂಡಿಸಿ ಸಾಂಸ್ಕೃತಿಕ ಸಾಮಾಜಿಕವಾಗಿ ಮುಂದೆ ತರಲು ನಿಮ್ಮೆಲ್ಲರ ಸಹಕಾರದೊಂದಿಗೆ ಶ್ರಮಿಸುವುದಾಗಿ’ ಕಡೂರು ತಾಲ್ಲೂಕು ಬೇಡಜಂಗಮ ಸಮಾಜದ ಅಧ್ಯಕ್ಷ ಎಂ.ಎಚ್. ಪ್ರಕಾಶಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.