ಕಡೂರು: ‘ನಾಯಕರನ್ನು ಹುಟ್ಟುಹಾಕುವ ಪಕ್ಷ ಜೆಡಿಎಸ್. ಅಲ್ಲಿ ಬೆಳೆದ ನಾಯಕರು ಪಕ್ಷ ಬಿಟ್ಟು ಹೋಗುವುದು ಹೊಸತೇನಲ್ಲ. ಅದರಿಂದ ಪಕ್ಷ ಸಂಘಟನೆಗೆ ಯಾವುದೇ ತೊಂದರೆಯಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕಡೂರಿನಲ್ಲಿ ಸೋಮವಾರ ಜೆಡಿಎಸ್ ಮುಖಂಡ ಸಿ.ಎಂ. ಧನಂಜಯ ಅವರ ಮತ್ತು ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ಪಕ್ಷವನ್ನು ತಾಲ್ಲೂಕಿನಲ್ಲಿ ಬೂತ್ ಮಟ್ಟದಿಂದ ಸಂಘಟಿಸಲು ಕಾರ್ತಕರ್ತರು ಉತ್ಸಾಹದಿಂದ ಇದ್ದಾರೆ. ಸಿ.ಎಂ. ಧನಂಜಯ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವುದು ತಾಲ್ಲೂಕಿನಲ್ಲಿ ಪಕ್ಷಕ್ಕೆ ದೊಡ್ಡ ಬಲ ಬಂದಿದೆ. ಚುನಾವಣೆಯಲ್ಲಿ ಅವರೂ ಸಹ ಸ್ಪರ್ಧಾ ಆಂಕಾಂಕ್ಷಿಯಾಗಿದ್ದಾರೆ. ಕಡೂರಿಗೆ ಅವರು ಪರಿಚಿತರು. ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳಲಿದ್ದಾರೆ’ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ‘ಪಕ್ಷ ಬಲವರ್ಧನೆಗೆ ಎಲ್ಲ ಕಾರ್ಯಕರ್ತರೂ ಒಗ್ಗೂಡಿ ಶ್ರಮಿಸಲಿದ್ದೇವೆ. ಪಕ್ಷ ಬಿಟ್ಟು ಹೋದವರ ಬಗ್ಗೆ ಮಾತನಾಡುವುದಿಲ್ಲ. ಸದ್ಯ ನಮ್ಮ ಗುರಿ ಜೆಡಿಎಸ್ ಪಕ್ಷದ ಸಂಘಟನೆ ಮಾತ್ರ. ಅದನ್ನು ಇಂದಿನಿಂದಲೇ ಆರಂಭಿಸಿದ್ದೇವೆ’ ಎಂದರು.
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಿ.ಎಂ. ಧನಂಜಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ. ಗಂಗಾಧರ ನಾಯ್ಕ, ಪುಟ್ಟೇಗೌಡ, ಮುತ್ತುರಾಜ್, ಪುರಸಭಾ ಸದಸ್ಯ ಮರುಗುದ್ದಿ ಮನು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ನಾಗರಾಜ್, ಹೇಮಂತ ಕುಮಾರ್, ಸುರೇಂದ್ರಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.