ADVERTISEMENT

ಕಡೂರು: 600 ಅಡಿ ಕೊರೆದರೂ ನೀರಿಲ್ಲ: ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ

ಬಾಲು ಮಚ್ಚೇರಿ
Published 22 ಫೆಬ್ರುವರಿ 2024, 5:04 IST
Last Updated 22 ಫೆಬ್ರುವರಿ 2024, 5:04 IST
ತಾಲ್ಲೂಕಿನ ಮಲ್ಲೇಶ್ವರ ಬಳಿ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟ
ತಾಲ್ಲೂಕಿನ ಮಲ್ಲೇಶ್ವರ ಬಳಿ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟ   

ಕಡೂರು: ಬರಗಾಲದಿಂದ ಕಂಗೆಟ್ಟಿರುವ ಕಡೂರು ತಾಲ್ಲೂಕಿನಲ್ಲಿ 600 ಅಡಿ ಆಳ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉದ್ಭವವಾಗಿದ್ದು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ದಾರಿ ಕಾಣದೆ ರೈತರು ಕಂಗೆಟ್ಟಿದ್ದಾರೆ.

ಡಾ.ಡಿ.ಎಂ.ನಂಜುಂಡಪ್ಪ ವರದಿ ತಾಲ್ಲೂಕನ್ನು ಪದೇ ಪದೇ ಬರಗಾಲಕ್ಕೆ ತುತ್ತಾಗುವ  ಪ್ರದೇಶ ಎಂದು ಗುರುತಿಸಿದೆ. ಕಡೂರು ತಾಲ್ಲೂಕು  ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲ ಬಳಸುತ್ತಿರುವ ಪ್ರದೇಶ ಎಂಬ ಕುಖ್ಯಾತಿಯನ್ನೂ ಪಡೆದಿದೆ.

ಅಂತರ್ಜಲದ ಅತಿ ಬಳಕೆಯಿಂದ ತಾಲ್ಲೂಕಿನಾದ್ಯಂತ ಕೊಳವೆಬಾವಿ ಕೊರೆಯಲು ಸರ್ಕಾರ ನಿರ್ಬಂಧ ವಿಧಿಸಿದೆ. ಕುಡಿಯುವ ನೀರಿನ ಉದ್ದೇಶ ಹೊರತುಪಡಿಸಿ ಇನ್ಯಾವುದೇ ಕಾರಣಕ್ಕೂ ಕೊಳವೆ ಬಾವಿ ಕೊರೆಯುವಂತಿಲ್ಲ‌. ತೀರ ಅನಿವಾರ್ಯ ಪರಿಸ್ಥಿತಿಯಲ್ಲಿ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶವಿದೆ. ಆದರೆ ಈ ಆದೇಶ ಕೇವಲ ಕಡತಗಳಲ್ಲಿ ಮಾತ್ರ ಉಳಿದಿದೆ. ಎಲ್ಲಿ ಬೇಕೆಂದರಲ್ಲಿ ಕೊಳವೆ ಬಾವಿ ಕೊರೆಯುವ ಕಾರ್ಯ ಎಗ್ಗಿಲ್ಲದೆ ಮುಂದುವರಿದಿದೆ.

ADVERTISEMENT

ಕೊಳವೆ ಬಾವಿ ಕೊರೆಯುವುದನ್ನು ನಿಂಯಂತ್ರಿಸುವುದು ಅಧಿಕಾರಿಗಳಿಗೆ ಕಷ್ಟಕರ‌. ಈಗಾಗಲೇ ನೀರಿಲ್ಲದೆ ತೆಂಗು ಮತ್ತು ಅಡಿಕೆ ತೋಟಗಳು ಒಣಗತೊಡಗಿವೆ. 22-23ನೇ ಸಾಲಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಅಡಿಕೆ ಸಸಿ ನಾಟಿ ಮಾಡಲಾಗಿದೆ. ಚೆನ್ನಾಗಿ ಬೆಳವಣಿಗೆ ಕಾಣುತ್ತಿದ್ದ ಸಮಯದಲ್ಲೇ  ತಾಲ್ಲೂಕಿನಲ್ಲಿ ಮತ್ತೆ ಬರಗಾಲ ಆವರಿಸಿದೆ. ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ಹರಸಾಹಸವಾಗಿದೆ‌. ಹಳ್ಳ ಕೊಳ್ಳಗಳಲ್ಲಿ ನೀರಿಲ್ಲ. ಕೆರೆಗಳಲ್ಲಿನ ನೀರನ್ನು ತೋಟಕ್ಕೆ ಬಳಸಿಕೊಳ್ಳುವ ಅವಕಾಶವಿಲ್ಲ. ಹಾಗಾಗಿ ಅಡಿಕೆ ತೋಟಗಳಿಗೆ ಕೊಳವೆ ಬಾವಿಯೇ ಆಧಾರ. ಬರುವ ಸ್ವಲ್ಪ ನೀರಲ್ಲೇ ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ರೈತರದ್ದಾಗಿದೆ.

ಸರಸ್ವತೀಪುರ ಭಾಗದಲ್ಲಿ ಜನವರಿಯಿಂದ ಈಚೆಗೆ 45ಕ್ಕೂ ಹೆಚ್ಚು ಕೊಳವೆಬಾವಿ ಕೊರೆಯಲಾಗಿದೆ. ನಾಲ್ಕೈದು ಬಾವಿಗಳಲ್ಲಿ ನೀರು ಅತ್ಯಲ್ಪ ಪ್ರಮಾಣದಲ್ಲಿ ದೊರೆತಿದೆ. 600 ಅಡಿ ಕೊರೆದರೂ ನೀರು ಸಿಗುತ್ತಿಲ್ಲವಾದ್ದರಿಂದ ರೈತರು ಹತಾಶರಾಗಿದ್ದಾರೆ.

ಕೊಳವೆ ಭಾವಿ ಕೊರೆಯಲು ನಿರ್ಬಂದವಿದ್ದರೂ ನೆಲ ಕೊರೆಯುವ ಕಾರ್ಯ ನಿರಂತರವಾಗಿ ಮುಂದುವರೆದಿದೆ.

ಕೊಳವೆ ಭಾವಿ ಕೊರೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಪಡೆದು ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ.

–ಎಂ.ಪಿ.ಕವಿರಾಜ್. ತಹಶೀಲ್ದಾರ್

600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ.ಇರುವ ಭಾವಿಯಲ್ಲೂ ನೀರು ಕಡಿಮೆಯಾಗಿದೆ. ಮಳೆ ಬಾರದಿದ್ದರೆ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವುದು ಬಹು ಕಷ್ಟಕರವಾಗಿದೆ

–ಗಿರಿಯಪ್ಪ, ರೈತ. ಸರಸ್ವತೀಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.