ಕಡೂರು: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೆ ಎಪಿಎಂಸಿ ಮೈದಾನ ಅನಪೇಕ್ಷಿತ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಈ ಜಾಗವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸಂಬಂಧಿಸಿದವರು ಮುಂದಾಗಬೇಕೆಂಬ ಬೇಡಿಕೆ ಸಾರ್ವಜನಿಕರದ್ದಾಗಿದೆ.
ಬೆಳಗಿನ ಹೊತ್ತು ಈ ಜಾಗ ‘ಸಾರ್ವಜನಿಕ ಬಯಲು ಶೌಚಾಲಯ’, ಕಸ ಸುರಿಯುವ ಜಾಗವಾಗುತ್ತದೆ. ಇಲ್ಲಿ ರುವ ಎರಡು ತೆರೆದ ಶೆಡ್ಗಳು ವಿಶ್ರಾಂತಿ, ನಿದ್ರಿಸುವವರಿಗೆ, ಇಸ್ಪೀಟ್ ವ್ಯಸನಿಗಳ ತಾಣವಾಗಿವೆ. ರಾತ್ರಿಯಾಗು
ತ್ತಿದ್ದಂತೆ ಮದ್ಯಪಾನಿಗಳ ಸ್ಥಳವಾಗಿದ್ದರೆ, ತೆರೆಮರೆಯಲ್ಲಿ ಅನೈತಿಕ ಚಟುವಟಿಕೆ ಗಳೂ ನಡೆಯುತ್ತಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. ತ್ಯಾಜ್ಯ ಕೊಳೆತು ಸುತ್ತಲಿನ ಅಂಗಡಿ ಮಳಿಗೆ ಗಳು, ವಾಸದ ಮನೆಗಳಿಗೆ ದುರ್ವಾಸನೆ ಹರಡಿ ಅಸಹನೀಯವೆನಿಸಿದೆ. ಆದರೆ ಎಪಿಎಂಸಿ ಆಡಳಿತ ಯಾವ ಕ್ರಮವನ್ನೂ ಕೈಗೊಳ್ಳದ ಪರಿಣಾಮ ಅಮೂಲ್ಯ ಜಾಗ ನಿರುಪಯುಕ್ತವಾಗಿದೆ.
ಇದು ಒಟ್ಟು 8 ಎಕರೆ 16 ಗುಂಟೆ ವಿಸ್ತೀರ್ಣವಿದ್ದು, ಇದರಲ್ಲಿ 3 ಎಕರೆಯನ್ನು ಸರ್ಕಾರಿ ಬಸ್ ನಿಲ್ದಾಣಕ್ಕೆ ನೀಡಲಾಗಿದೆ. ಉಳಿದ 5ಎಕರೆ 16 ಗುಂಟೆ ಜಾಗ ಎಪಿಎಂಸಿ ಸುಪರ್ದಿಯಲ್ಲಿದ್ದು, ಇಲ್ಲಿ ಮೂರು ತೆರೆದ ಮಾರುಕಟ್ಟೆ ಶೆಡ್ ಗಳಿವೆ. ಐದು ಮಳಿಗೆಗಳಿವೆ. ಆದರೆ ಬಳಕೆ, ಗಳಿಕೆ ಇಲ್ಲ. ಕಸದ ರಾಶಿಯೇ ತುಂಬಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಜಾಗವನ್ನು ಉಪಯೋಗಿಸಿಕೊಳ್ಳುವಲ್ಲಿ ಎಪಿಎಂಸಿ ಆಡಳಿತ ಮಂಡಳಿ ವಿಫಲವಾಗಿದೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿದೆ.
ಪಟ್ಟಣದ ಪ್ರಮುಖವಾದ ಜಾಗವೊಂದು ಅನಪೇಕ್ಷಿತ ಚಟುವಟಿಕೆಗಳಿಂದ ಮುಕ್ತವಾಗಿ, ಜನರ ಉಪಯೋಗಕ್ಕೆ ದೊರೆಯಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ.
ಮೈದಾನ, ಮಳಿಗೆ ಮರುಬಳಕೆ: ಈ ಜಾಗದಲ್ಲಿರುವ ಐದು ಮಳಿಗೆಗಳನ್ನು ನೈಟ್ ಕ್ಯಾಂಟೀನ್ ನಡೆಸಲು ಟೆಂಡರ್ ನೀಡಲಾಗಿದೆ. ಶಾಸಕ ಬೆಳ್ಳಿಪ್ರಕಾಶ್ ಅವರಿಗೆ ಈ ಜಾಗದಲ್ಲಿ ಫುಡ್ಕೋರ್ಟ್ ಮಾಡುವ ಚಿಂತನೆಯಿದೆ. ಪೊಲೀಸ್ ಇಲಾಖೆ ಮತ್ತು ಪುರಸಭೆಯವರೊಂದಿಗೆ ಚರ್ಚಿಸಲಾಗಿದೆ. ಪಟ್ಟಣದಲ್ಲಿ ಸುಸಜ್ಜಿತವಾಗಿ ದೇವರಾಜ ಅರಸು ರಸ್ತೆಯನ್ನು ಪುನರ್ನಿರ್ಮಾಣ ಮಾಡಿರುವ ಶಾಸಕರು ಈ ಹಳೆ ಎಪಿಎಂಸಿ ಮೈದಾನವನ್ನೂ ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದಾಗುತ್ತಾರೆಂಬ ವಿಶ್ವಾಸವಿದೆ ಎಂದು ಎಪಿಎಂಸಿ ಅಧ್ಯಕ್ಷ ಚೌಳಹಿರಿಯೂರು ರವಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.