ADVERTISEMENT

ಚಿಕ್ಕಮಗಳೂರು | ಜಾನಪದ ಸಾಹಿತ್ಯ ಬದುಕಿಗೆ ದಾರಿದೀಪ

ಕಡೂರು: ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:17 IST
Last Updated 26 ಜೂನ್ 2022, 6:17 IST
ಕಡೂರಿನ ಯಗಟಿಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಜಾನಪದ ಸಮ್ಮೇಳನವನ್ನು ಶಾಸಕ ಬೆಳ್ಳಿಪ್ರಕಾಶ್ ಅವರು ರಾಗಿ ಬೀಸುವ ಮೂಲಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್, ಪಿ.ಎಂ. ಶಂಕರಪ್ಪ, ಸುರೇಶ್, ಜಗದೀಶ್ವರಾಚಾರ್, ಸೂರಿ ಶ್ರೀನಿವಾಸ್, ರವಿಪ್ರಕಾಶ್ ಇದ್ದರು (ಎಡಚಿತ್ರ). ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಕರೆತರಲಾಯಿತು.
ಕಡೂರಿನ ಯಗಟಿಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಜಾನಪದ ಸಮ್ಮೇಳನವನ್ನು ಶಾಸಕ ಬೆಳ್ಳಿಪ್ರಕಾಶ್ ಅವರು ರಾಗಿ ಬೀಸುವ ಮೂಲಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್, ಪಿ.ಎಂ. ಶಂಕರಪ್ಪ, ಸುರೇಶ್, ಜಗದೀಶ್ವರಾಚಾರ್, ಸೂರಿ ಶ್ರೀನಿವಾಸ್, ರವಿಪ್ರಕಾಶ್ ಇದ್ದರು (ಎಡಚಿತ್ರ). ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಕರೆತರಲಾಯಿತು.   

ಕಡೂರು: ಜನಪದರ ಬದುಕು ಯಾವುದೇ ವ್ಯಕ್ತಿ ಪ್ರಧಾನವಲ್ಲದ ಸಮುಷ್ಟಿಯ ಬದುಕಾಗಿತ್ತು. ನೇಪಥ್ಯಕ್ಕೆ ಸರಿದಿರುವ ಆ ಶ್ರೀಮಂತ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಸರ್ಕಾರ ಮತ್ತು ನಮ್ಮ ಮೇಲಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಯಗಟಿಪುರ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಕರ್ನಾಟಕ ಜಾನಪದ ಪರಿಷತ್‌ ಆಯೋಜಿಸಿದ್ದ ಪ್ರಥಮ ತಾಲ್ಲೂಕು ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ಷರ ಜ್ಞಾನವಿಲ್ಲದ ಸಮಯದಲ್ಲಿ ಬದುಕಿನ ಸಾರವನ್ನು ಆಡುಭಾಷೆಯಲ್ಲಿ‌ ಕಟ್ಟಿಕೊಟ್ಟದ್ದು ಜಾನಪದ. ನಿತ್ಯ ಜೀವ ನದ ಏರುಪೇರುಗಳ ಜತೆ ಸನ್ಮಾರ್ಗದಲ್ಲಿ ನಡೆಯಲು ಬೇಕಾದ ಮಾರ್ಗದರ್ಶನ ನಮಗೆ ಜಾನಪದದಲ್ಲಿ ದೊರೆಯುತ್ತದೆ. ಜಾನಪದ ಸಾಹಿತ್ಯ ನಮ್ಮ ಬದುಕಿಗೆ ದಾರಿದೀಪವೇ ಆಗಿದೆ ಎಂದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಿಂದ ಜಾನಪದ ಕಲಾ ಪ್ರಕಾರಗಳು ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಪ್ರಸ್ತುತ ದಿನಗಳಲ್ಲಿ ಅರ್ಥವಿಲ್ಲದ ಅಸಭ್ಯ ನೃತ್ಯಗಳ ಹಾವಳಿಯಲ್ಲಿ ಜಾನಪದ ಕಲೆಗಳಿಗೆ ಬೆಲೆಯಿಲ್ಲದಂತಾಗಿದೆ. ನಮ್ಮ ಸಂಸ್ಕೃತಿಯ ಮೂಲಬೇರು ಜಾನಪದ. ಅದು ಉಳಿದರೆ ನಮ್ಮ‌ ಸಂಸ್ಕೃತಿ ಉಳಿದಂತೆ. ಇದನ್ನು ಎಲ್ಲರೂ ಅರಿಯಬೇಕು ಎಂದರು.

ಸಮ್ಮೇಳನವನ್ನು ರಾಗಿ ಬೀಸುವ ಮೂಲಕ ಉದ್ಘಾಟಿಸಿದ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ‘ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜಾನಪದ ಜೀವಂತವಾಗಿದೆ. ಜಾನಪದ ಪ್ರಾಕಾರ ವನ್ನು ಉಳಿಸಿ ಮುಂದಿನ‌ ಪೀಳಿಗೆಗೂ ಅದರ ಪರಿಚಯ ಮಾಡಿಕೊಡುವ ತುರ್ತು ಅಗತ್ಯವಿದೆ. ಜಾನಪದ ಪರಿಷತ್ತಿನ ಕಾರ್ಯಗಳಿಗೆ ತಮ್ಮ‌ ಸಹಕಾರವೂ ಇರುತ್ತದೆ’ ಎಂದರು.

ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಇರುವ 430ಕ್ಕೂ ಹೆಚ್ಚು ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಲು ಎಲ್ಲರ ಸಹಕಾರ ಅವಶ್ಯಕವಾಗಿದೆ. ಜಾನಪದವು ಯಾವುದೇ ಬೂಟಾಟಿಕೆ, ಬೆಡಗು ಭಿನ್ನಾಣವಿಲ್ಲದ ಕಲೆಯಾಗಿದೆ. ಜಿಲ್ಲೆಯಲ್ಲಿ ವಿವಿಧ ಪ್ರಕಾರಗಳ ಜನಪದ ಕಾರ್ಯಗಾರಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು. ಜನಪದರು ಬಿಟ್ಟು ಹೋಗಿರುವ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಿದೆ. ಜಾನಪದ ಪರಿಷತ್ತು ಈ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖವಾಗಿರುತ್ತದೆ ಎಂದರು.

ಬೆಂಗಳೂರು ಜಿಲ್ಲಾ ಹೆಚ್ಚುವರಿ ನೊಂದಾಣಾಧಿಕಾರಿ ಎಚ್.ಸಿ. ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರಗ, ಮಾಳೇನಹಳ್ಳಿ ಬಸಪ್ಪ, ಹಿರಿಯ ಕಲಾವಿದೆ ಲಕ್ಷ್ಮಿದೇವಮ್ಮ, ಬಿ.ಪಿ. ದೇವಾನಂದ್, ಮಾರ್ಗದ ಎಂ. ವಿಶ್ವನಾಥ್, ಪಿ.ಎಂ. ಶಂಕರಪ್ಪ, ಪಿ.ಎಂ. ಪ್ರಸನ್ನ ಕುಮಾರ್, ವೈ.ಎಸ್. ರವಿಪ್ರಕಾಶ್, ಎಂ. ರಾಜಪ್ಪ, ರವಿ, ಜಯಣ್ಣ, ದೇವರಾಜ್, ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರಪ್ಪ, ವೈ.ಎನ್. ನಾಗರಾಜ್‌ದಾಸ್, ಪರಮೇಶ್ವ ರಪ್ಪ, ಕಿರಣ್‌ಪ್ರಭು, ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.