ADVERTISEMENT

ಮಕ್ಕಳಿಗೆ ಹಿಂದಿನ ತರಗತಿ ಸಾಮರ್ಥ್ಯ ಕಲಿಕೆ; ಶಿಕ್ಷಕರಿಗೆ ತರಬೇತಿ

2022 – 23ನೇ ಶೈಕ್ಷಣಿಕ ವರ್ಷ: ಕಲಿಕಾ ಚೇತರಿಕೆ ವರ್ಷ

ಪ್ರಜಾವಾಣಿ ವಿಶೇಷ
Published 11 ಮೇ 2022, 2:55 IST
Last Updated 11 ಮೇ 2022, 2:55 IST
ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಪ್ರೌಢಶಾಲೆ ಶಿಕ್ಷಕರಿಗೆ ತರಬೇತಿ ತರಗತಿ ನಡೆಯಿತು.
ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಪ್ರೌಢಶಾಲೆ ಶಿಕ್ಷಕರಿಗೆ ತರಬೇತಿ ತರಗತಿ ನಡೆಯಿತು.   

ಚಿಕ್ಕಮಗಳೂರು: ಕೋವಿಡ್‌ ತಲ್ಲಣದಿಂದ ಮಕ್ಕಳಿಗಾದ ಕಲಿಕಾ ಕೊರತೆ ನೀಗಿಸಲು 2022 – 23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ’ ವರ್ಷವಾಗಿ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ತರಬೇತಿ ಶುರುವಾಗಿದೆ.
ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯಾ ಬ್ಲಾಕ್‌ಗಳಲ್ಲಿ ಎರಡು ದಿನ ತರಬೇತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಿಷಯಕ್ಕೆ (ಗಣಿತ, ವಿಜ್ಞಾನ...) ಸಂಬಂಧಿಸಿದಂತೆ ಪ್ರತಿ ಶಿಕ್ಷಕರಿಗೆ ಕೈಪಿಡಿ ಒದಗಿಸಲಾಗುತ್ತಿದೆ.
ವಿದ್ಯಾರ್ಥಿ ಈಗಿರುವ ತರಗತಿಗೆ ಬೇಕಾದ ಹಿಂದಿನ ತರಗತಿಯ ಕಲಿಕಾ ಸಾಮರ್ಥ್ಯವನ್ನು ಕಲಿಸುವ ಕ್ರಿಯೆ ಕಲಿಕಾ ಚೇತರಿಕೆ. ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ. ಶೈಕ್ಷಣಿಕ ವರ್ಷದ ಆರಂಭದಿಂದ ವರ್ಷಪೂರ್ತಿ ನಿರಂತರ ಕಲಿಕೆ ಪ್ರಕ್ರಿಯೆ ನಡೆಯಲಿದೆ.
ಕೋವಿಡ್‌ ತಲ್ಲಣದಿಂದ ಮಕ್ಕಳು ಎರಡು ವರ್ಷ ಭೌತಿಕ ತರಗತಿಗಳಿಗೆ ಹಾಜರಾಗಲಿಲ್ಲ, ಮುಂದಿನ ತರಗತಿಗೆ ಹೋಗಿದ್ದಾರೆ. ಎರಡು ವರ್ಷಗಳ ಕಲಿಯದ ಸಾಮರ್ಥ್ಯವನ್ನು ಒಳಗೊಂಡ ಪಠ್ಯ– ಅಭ್ಯಾಸ ಪುಸ್ತಕವನ್ನು ಮಕ್ಕಳಿಗೆ ಒದಗಿಸಲಾಗುವುದು.
‘ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ– 3712 ಶಿಕ್ಷಕರು, ಪ್ರೌಢಶಾಲೆಗಳ–767 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಡಯಟ್‌ನಲ್ಲಿ ಒಂದು ತಂಡದಲ್ಲಿ 40ರಿಂದ 50 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಕಲಿಕಾ ಚೇತರಿಕೆ ನೋಡಲ್‌ ಅಧಿಕಾರಿ ಎಂ.ಸಿ.ಕನ್ನಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಿನ ತರಗತಿಯ ಪಠ್ಯದ ಜೊತೆಗೆ ಹಿಂದಿನ ತರಗತಿಗಳ ಪ್ರಮುಖ ಪಠ್ಯಾಂಶಗಳನ್ನು ಕಲಿಸುತ್ತಾರೆ. 1ರಿಂದ 9 ನೇ ತರಗತಿವರೆಗೆ ಕಲಿಕಾ ಚೇತರಿಕೆ ಅನ್ವಯವಾಗುತ್ತದೆ. ಮೇ 16ರಿಂದ ತರಗತಿಗಳು ಆರಂಭವಾಗಲಿವೆ’ ಎಂದು ಅವರು ತಿಳಿಸಿದರು.
ಗುಣಮಟ್ಟದ ಶಿಕ್ಷಣ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ. ಶಿಕ್ಷಕರನ್ನು ಸನ್ನದ್ಧಗೊಳಿಸುವ ಕಾರ್ಯವು ಬಹುತೇಕ ಪೂರ್ಣಗೊಂಡಿದೆ.

‘ಕಲಿಕಾ ಚೇತರಿಕೆ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವ್ಯಾವ ಅಂಶಗಳನ್ನು ಕಲಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಿಂದ ಬಹಳ ಅನುಕೂಲವಾಗುತ್ತದೆ’ ಎಂದು ಹಿರೇಗೌಜ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ, ಶಿಬಿರಾರ್ಥಿ ಶರಣಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT