ಚಿಕ್ಕಮಗಳೂರು: ತಾಲ್ಲೂಕಿನ ಹಂಪಾಪುರದ ಕರ್ಕಿ ಕೆರೆ ಏರಿ ಮಾರ್ಗದ ರಸ್ತೆ ಬಿರುಕು ಬಿಟ್ಟಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ಕೆಂಪನಹಳ್ಳಿ– ಹಂಪಾಪುರ ಸಂಪರ್ಕ ಮಾರ್ಗದಲ್ಲಿನ ಈ ಕೆರೆ ದಂಡೆ ರಸ್ತೆ ಸುಮಾರು 30 ಮೀಟರ್ ಉದ್ದದಷ್ಟು ಬಿರುಕು ಬಿಟ್ಟಿದೆ. ಮೂರು ಅಡಿಯಷ್ಟು ಆಳಕ್ಕೆ ಕುಸಿದಿದೆ.
ಹಂಪಾಪುರದ ಗ್ರಾಮಸ್ಥರೂ ಆಗಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಪಿ. ಮಂಜೇಗೌಡ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಪಿಎಂಜಿಎಸ್ನ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 2018ರಲ್ಲಿ ₹ 3.38 ಕೋಟಿ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ಕೈಗೊಂಡಿದ್ದರು. ಕಾಮಗಾರಿ ಕಳಪೆಯಾಗಿದ್ದು, ರಸ್ತೆ ಬಿರುಕು ಬಿಟ್ಟಿದೆ. ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಕೆರೆ ಏರಿ ಒಡೆದರೆ ಪಕ್ಕದಲ್ಲಿನ ಜಮೀನುಗಳಿಗೆ ನೀರು ನುಗ್ಗುತ್ತದೆ. ತಕ್ಷಣವೇ ರಿಪೇರಿಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಆರ್ಡಿಪಿಆರ್ ವಿಭಾಗದ ಎಂಜಿನಿಯರ್ ಜಯಪ್ರಕಾಶ್, ಇತರ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು.
‘ಈ ಮಾರ್ಗದಲ್ಲಿ ಸದ್ಯಕ್ಕೆ ಸಂಚಾರ ನಿರ್ಬಂಧಿಸಲಾಗಿದೆ. ದುರಸ್ತಿ ಕಾರ್ಯ ತಕ್ಷಣ ಕೈಗೆತ್ತಿಕೊಳ್ಳಲಾಗುವುದು’ ಎಂದು ಜಯಪ್ರಕಾಶ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.