ಶೃಂಗೇರಿ: ‘1945-46ರಲ್ಲಿ ಪಟ್ಟಣ ದಲ್ಲಿದ್ದ ಶಾರದಾ ಬ್ಯಾಂಕ್, ಕರ್ಣಾಟಕ ಬ್ಯಾಂಕಿನ ಜೊತೆ ವಿಲೀನಗೊಂಡಿತ್ತು. ಹಾಗಾಗಿ, ಶಾರದಾ ಮಠಕ್ಕೂ ಕರ್ಣಾಟಕ ಬ್ಯಾಂಕಿಗೆ ಅವಿನಾಭಾವ ಸಂಬಂಧವಿದೆ’ ಎಂದು ಶಾರದಾ ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಹೇಳಿದರು.
ಶೃಂಗೇರಿಯ ಅಡ್ಡಗದ್ದೆಯಲ್ಲಿ ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕಿನ 877ನೇ ನೂತನ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.
‘ಬ್ಯಾಂಕ್ಗಳ ಅಭಿವೃದ್ಧಿಗೆ ಗ್ರಾಹಕರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು. ತಂತ್ರಜ್ಞಾನದ ಪರಿಣಾಮದಿಂದ ಆನ್ಲೈನ್ ವ್ಯವಹಾರ ಪ್ರಾರಂಭಗೊಂಡಿದೆ. ಸಾಲ ಮರುಪಾವತಿಯನ್ನು ಸಕಾಲದಲ್ಲಿ ಗ್ರಾಹಕರು ಮಾಡುವ ಮನೋಭಾವ ಇರಬೇಕು. ಬಹಳ ವರ್ಷಗಳ ಹಿಂದೆ ಬ್ಯಾಂಕ್ನಲ್ಲಿ ಕೆಲಸವಿದ್ದವರು ದೊಡ್ಡವರು ಎಂಬ ಭಾವನೆ ಇತ್ತು. ದೇಶದಲ್ಲಿ ಪ್ರಸ್ತುತ ಹಲವು ಬ್ಯಾಂಕ್ ದಿವಾಳಿ ಆಗಿದೆ. ಆದರೆ, ಕರ್ಣಾಟಕ ಬ್ಯಾಂಕ್ ಸೀಮಿತ ಅವಧಿಯಲ್ಲಿ ಜನರ ವಿಶ್ವಾಸ ಗಳಿಸಿದೆ’ ಎಂದರು.
ಮುಖ್ಯ ನಿರ್ವಹಣಾ ಅಧಿಕಾರಿ ವೈ.ವಿ ಬಾಲಚಂದ್ರ ರಾವ್ ಮಾತನಾಡಿ, ‘ಬ್ಯಾಂಕ್ 1924ರಲ್ಲಿ ₹ 11,500 ಬಂಡವಾಳದೊಂದಿಗೆ ಪ್ರಾರಂಭ ಗೊಂಡಿತ್ತು. ಬ್ಯಾಂಕ್ ಆದ್ಯತೆ ಮೇರೆಗೆ ಸಾಲ ನೀಡುವತ್ತ ಹೆಚ್ಚಿನ ಗಮನ ನೀಡಬೇಕು. ಬ್ಯಾಂಕ್ ಪ್ರಾರಂಭವಾಗಿ 98 ವರ್ಷಗಳು ಕಳೆದಿದೆ. ದೇಶದ 22 ರಾಜ್ಯಗಳಲ್ಲಿ ಬ್ಯಾಂಕ್ ಸ್ಥಾಪನೆಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ಶಾಖೆಗಳನ್ನು ನಿರ್ಮಿಸುವ ಆಶಯ ನಮ್ಮದು’ ಎಂದರು.
ಶಿವಮೊಗ್ಗ ವಲಯದ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಯವದನ ಉಪಾಧ್ಯಾಯ, ಅಧಿಕಾರಿ ಗಳಾದ ರಾಘವೇಂದ್ರ ಉಡುಪ, ಶರತ್ಕುಮಾರ್, ನಿರಂಜನ್ ಹೆಗ್ಡೆ, ಸ್ಥಳೀಯರಾದ ಹೆಬ್ಬಿಗೆ ರಾಮಚಂದ್ರ ರಾವ್, ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರರಾವ್, ಉಪಾಧ್ಯಕ್ಷೆ ಆರತಿ ಕೃಷ್ಣಮೂರ್ತಿ, ನಿರ್ದೇಶಕ ಶ್ರೀಧರ್ರಾವ್, ಸಿಇಒ ರೋಹಿಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.