ಚಿಕ್ಕಮಗಳೂರು: ‘ಭಾಷಾವಾರು ಪ್ರಾಂತ್ಯ ರಚನೆಯಾದಾಗ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು.ಗಡಿ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಅನ್ನು ಪ್ರಶ್ನಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉತ್ತರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಡಿ ವಿಚಾರವನ್ನು ಆಗಾಗ್ಗೆ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳವುದು ಬಹಳ ವರ್ಷಗಳಿಂದ ನಡೆದಿದೆ. ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಮುಖ್ಯಮಂತ್ರಿಯಾಗಿ ವಿವಾದಗಳನ್ನು ಕೆದುಕುವುದು ಅನ್ಯಾಯ ಮಾಡಿದವರ ಹೆಗಲಲ್ಲೇ ಕುಳಿತು ಮಾತನಾಡಿದಂತೆ. ನೈತಿಕತೆ ಇದ್ದರೆ ಕಾಂಗ್ರೆಸ್ ಹೆಗಲಿನಿಂದ ಕೆಳಗಿಳಿದು ಮಾತನಾಡಲಿ’ ಎಂದು ಚುಚ್ಚಿದರು.
ಸಿದ್ದರಾಮಯ್ಯ ಅವರದ್ದು ಜಿನ್ನಾ ವಾದ
‘ಸಿದ್ದರಾಮಯ್ಯ ಅವರಿಗೆ ತನ್ನ ಮೂಲದ ಬಗ್ಗೆಯೇ ಸಂಶಯ ಕಾಡುತ್ತದೆ. ಇನ್ನು ಆರ್ಎಸ್ಎಸ್ ಮೂಲ ಗೊತ್ತಾಗುವುದಾದರೂ ಹೇಗೆ?’ ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಬದಲಾವಣೆಗೆ ಸಿದ್ಧತೆ ನಡೆದಿರುವುದಾಗಿ ಆರ್ಎಸ್ಎಸ್ ಮೂಲಗಳು ಹೇಳಿವೆಯೆಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಾತಿವಾದ, ವೋಟ್ ಬ್ಯಾಂಕ್ಗಾಗಿ ಓಲೈಕೆ ರಾಜಕಾರಣ ಮಾಡುವವರಿಗೆ ಆರ್ಎಸ್ಎಸ್ ಮೂಲ ಗೊತ್ತಾಗಲ್ಲ. ಅದು ಅವರಿಗೆ ಅರ್ಥವೂ ಆಗಲ್ಲ’ ಎಂದು ತಿವಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.