ಕೊಪ್ಪ: ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದ್ದ ತಾಲ್ಲೂಕಿನ ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಗಾಳಿಮರ ನಿವಾಸಿಯಾದ ಪರಿಶಿಷ್ಟ ಮಹಿಳೆ ಬೆಳ್ಳಮ್ಮ ಎಂಬುವರ ಗುಡಿಸಲನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಪದಾಧಿಕಾರಿಗಳು ಬುಧವಾರ ಮರುನಿರ್ಮಾಣ ಮಾಡಿಕೊಟ್ಟಿದ್ದಾರೆ.
‘ವೃದ್ಧೆ ಬೆಳ್ಳಮ್ಮ ಅವರು ಅಂಗವಿಕಲೆಯೂ ಆಗಿದ್ದಾರೆ. ಗ್ರಾಮಸ್ಥರೇ ಈ ಹಿಂದೆ ಶೆಡ್ ನಿರ್ಮಿಸಿಕೊಟ್ಟಿದ್ದರು. ವಿದ್ಯುತ್ ಇಲ್ಲದಿದ್ದರಿಂದ ಗ್ರಾಮಸ್ಥರೇ ಸೋಲಾರ್ ದೀಪ ಹಾಕಿಸಿಕೊಟ್ಟಿದ್ದರು. ಮನೆ ತೆರವುಗೊಳಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಲೈಟ್, ದಿನಸಿ ವಸ್ತುಗಳನ್ನು ಹಾಳು ಮಾಡಿದ್ದಾರೆ’ ಎಂದು ಆರೋಪಿಸಿ ಡಿಎಸ್ಎಸ್ ನ ಜಿಲ್ಲಾ ಸಮಿತಿ ಅಧ್ಯಕ್ಷ ರಾಜಾಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.
‘ಅಂಗವಿಕಲೆ ಮಹಿಳೆ ವಾಸವಿದ್ದ ಮನೆಯನ್ನು ಶೃಂಗೇರಿಯ ಆರ್ಎಫ್ಒ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಬಂದಿ ನಾಶಪಡಿಸಿದ್ದಾರೆ. ಮಳೆಗಾಲದಲ್ಲಿ ಏಕಾಏಕಿ ಬಂದು ಮನೆ ಕಿತ್ತು ಹಾಕಿದರೆ ಆ ಮಹಿಳೆ ಎಲ್ಲಿಗೆ ಹೋಗಬೇಕು, ಯಾರ ಆಶ್ರಯ ಪಡೆಯಬೇಕು, ಮಹಿಳೆಯನ್ನು ಇಲಾಖೆ ಸಿಬ್ಬಂದಿ ಮನೆಯಿಂದ ಎಳೆದು ಹೊರ ಹಾಕಿರುವುದು ಖಂಡನೀಯ’ ಎಂದು ಕಿಡಿಕಾರಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜು, ಕ್ಷೇತ್ರ ಉಸ್ತುವಾರಿ ಅಧ್ಯಕ್ಷ ಸುರೇಶ್, ಕ್ಷೇತ್ರಾಧ್ಯಕ್ಷ ರಘುವೀರ್, ಸಂಘಟನೆಯ ಕಾರ್ಯಕರ್ತರು
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.