ಕೊಪ್ಪ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆಯು ತನ್ನ ಬಸ್ ಸೇವೆ ಸ್ಥಗಿತಗೊಳಿಸಿ ಇದೇ 16ಕ್ಕೆ ಒಂದು ವರ್ಷ ಕಳೆದಿದೆ.
ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ, ಮುಂದಿನ ನಡೆ ಕುರಿತು ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಸಾರ್ವಜನಿಕ ಸಮಾಲೋಚನಾ ಸಭೆಯನ್ನು 2020ರ ಫೆ.16ರಂದು ನಡೆಸಿತ್ತು.
ಸಭೆಯಲ್ಲಿ ನಿರ್ಣಯಿಸಿದಂತೆ ಮಾರನೇ ದಿನದಿಂದ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಯನ್ನು ಸಂಸ್ಥೆ ಕಾರ್ಮಿಕರು, ಸಿಬ್ಬಂದಿ ಫೆ. 24ರ ವರೆಗೆ ಕೈಗೊಂಡಿದ್ದರು. ‘ಸಂಸ್ಥೆ ಉಳಿವಿಗಾಗಿ ತಮ್ಮ ಸಹಕಾರ ಇದೆ’ ಎಂಬುದಾಗಿ ಈ ವೇಳೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ನಂತರ ಧರಣಿ ಸ್ಥಗಿತಗೊಳಿಸಲಾಗಿತ್ತು.
ಈ ನಡುವೆ ಕೆಲವು ಖಾಸಗಿ ವ್ಯಕ್ತಿಗಳು ಸಂಸ್ಥೆ ಉಳಿವಿಗಾಗಿ ಆರ್ಥಿಕ ಸಹಾಯಧನ ನೀಡುವುದಾಗಿ ಭರವಸೆ ವ್ಯಕ್ತಪಡಿಸಿ, ಮುಂದೆ ಬಂದಿದ್ದರು. ಕಾರ್ಮಿಕರಲ್ಲಿ ಒಂದಿಷ್ಟು ಆಶಾಭಾವನೆ ವ್ಯಕ್ತವಾಗಿತ್ತು. ಈ ನಡುವೆ ಕೆಲವು ಸಿಬ್ಬಂದಿ ಸಂಸ್ಥೆ ಆಡಳಿತ ಮಂಡಳಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಲೆನಾಡಿನ ಹೆಸರಾಂತ ಸಂಸ್ಥೆಯೊಂದು ಮೂರು ದಶಕಗಳ ಕಾಲ ಜನರಿಗೆ ಸಾರಿಗೆ ಸೇವೆ ಒದಗಿಸುತ್ತಾ ಬಂದಿತ್ತು. ಕುಗ್ರಾಮಗಳಿಗೂ ಸಂಪರ್ಕ ವ್ಯವಸ್ಥೆ ಕಲ್ಪಿಸಿತ್ತು. ಸಹಕಾರ ತತ್ವದಡಿ ಕಾರ್ಮಿಕರೇ ಕಟ್ಟಿ ಬೆಳೆಸಿದ ಏಕೈಕ ಸಂಸ್ಥೆ ಎಂದು ಏಷ್ಯಾ ಖಂಡದಲ್ಲಿಯೇ ಹೆಸರು ಪಡೆದಿತ್ತು. ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ, ಕೂಲಿ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದ ಹೆಗ್ಗಳಿಕೆ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.