ADVERTISEMENT

ಕೊಪ್ಪಕ್ಕೆ ಎಫ್ಎಸ್ಓ ಕಚೇರಿ ತರದಿದ್ದರೆ ಕಾನೂನು ಹೋರಾಟ: ಎಸ್.ಎನ್.ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:14 IST
Last Updated 17 ಡಿಸೆಂಬರ್ 2025, 7:14 IST
ರಾಮಸ್ವಾಮಿ
ರಾಮಸ್ವಾಮಿ   

ಕೊಪ್ಪ: ‘ರೈತರ ಭೂಮಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್ಎಸ್ಓ) ಕಚೇರಿ ಕೊಪ್ಪಕ್ಕೆ ವರ್ಗಾಯಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು' ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಎಚ್ಚರಿಸಿದರು.

ಬಾಳಗಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಡೂರಿನಲ್ಲಿರುವ ಎಫ್ಎಸ್ಓ ಕಚೇರಿ ಕೊಪ್ಪಕ್ಕೆ ತರುವುದಾಗಿ ಚುನಾವಣೆ ಸಂದರ್ಭದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಹೇಳಿದ್ದರು. ರಾಜೇಗೌಡ ಅವರು ಶಾಸಕರಾಗಿ ಆಯ್ಕೆಯಾದರೂ ಗಮನ ಹರಿಸಿದಂತೆ ಕಾಣುತ್ತಿಲ್ಲ. ರೈತರು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿ ಏನಾಯಿತು ಎಂದು ವಿಚಾರಿಸಲು ಕಡೂರಿಗೆ ಅಲೆಯುವಂತಾಗಿದೆ’ ಎಂದು ದೂರಿದರು.

'ಅತಿವೃಷ್ಟಿ ಪರಿಹಾರ ಬರುತ್ತಿಲ್ಲ. ಎಲೆಚುಕ್ಕಿ ರೋಗ ಹೆಚ್ಚಾಗಿದೆ. ಬೆಳೆ ವಿಮೆ ಕೆಲವು ಕಡೆ ಬಂದಿದೆ. ಕೆಲ  ಕಡೆ ಬಂದಿಲ್ಲ, ಕೆಲವು ಕಡೆ ಕಡಿಮೆಯಾಗಿದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ವಿಮಾ ಕಂಪೆನಿಗಳು, ತೋಟಗಾರಿಕೆ ಇಲಾಖೆ, ಹವಾಮಾನ ಇಲಾಖೆ ಮಳೆ ಮಾಪನ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅವರೆಲ್ಲ ಸೇರಿ ರೈತರಿಗೆ ಧೋಖಾ ಮಾಡುತ್ತಿದ್ದಾರೆ. ಜೂನ್ ತಿಂಗಳಲ್ಲಿ ಮಳೆ ಆಗಿದ್ದರೂ ಅದನ್ನು ಕೈ ಬಿಡಲಾಗಿದೆ. ಟರ್ಮ್ ಶೀಟ್ ಅನ್ನು ವಿಮಾ ಕಂಪೆನಿಗೆ ಅನುಕೂಲ ಆಗುವಂತೆ ಮಾಡಿದ್ದಾರೆ.ರಾಜ್ಯ ಕೃಷಿ ಸಚಿವರು ಅಧಿಕಾರಿಗಳನ್ನು ಕೂರಿಸಿಕೊಂಡು ಟರ್ಮ್ ಶೀಟ್ ಪರಿಶೀಲಿಸಬೇಕು. ಈ ಬಗ್ಗೆ ಕ್ಷೇತ್ರದ ಶಾಸಕರು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

'ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇದ್ದಾಗ ಹೆಕ್ಟೇರ್‌ಗೆ ₹52 ಸಾವಿರ ಅತಿವೃಷ್ಟಿ ಪರಿಹಾರ ಬರುತ್ತಿತ್ತು. ಅತಿವೃಷ್ಟಿ ಪರಿಹಾರ ಕಡಿಮೆಯಾಗಿದ್ದರ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆಯಾಗುತ್ತಿಲ್ಲ. ಅರಣ್ಯ ಒತ್ತುವರಿ ಬಗ್ಗೆ ಎಸ್ಐಟಿ ರಚಿಸಿದ್ದಾರೆ. ಅವರು ಕಂದಾಯ ಭೂಮಿಗೂ ನೋಟೀಸ್ ಕೊಡಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕು. ಕೊಪ್ಪ, ಶೃಂಗೇರಿಯವರು ಇದಕ್ಕಾಗಿ ಚಿಕ್ಕಮಗಳೂರಿಗೆ ಹೋಗಬೇಕು. ಆದ್ದರಿಂದ ಉಪ ವಿಭಾಗಾಧಿಕಾರಿ ಕಚೇರಿ ಕೊಪ್ಪಕ್ಕೆ ತರಬೇಕು’ ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಕೆ.ಕಿರಣ್ ಮಡಬಳ್ಳಿ, ರಾಘವೇಂದ್ರ, ಪ್ರದೀಪ್, ಅನೂಪ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.