ADVERTISEMENT

ಎಲ್ಲ ಧರ್ಮಗಳ ಮೂಲ ಮಾನವ ಧರ್ಮ

ಲಕ್ಷ್ಮೀವೆಂಕಟರಮಣ ಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:02 IST
Last Updated 8 ನವೆಂಬರ್ 2022, 6:02 IST
ಗೌರಿಗದ್ದೆಯಲ್ಲಿ ತಿರುಮಲ ಲಕ್ಷ್ಮೀವೆಂಕಟರಮಣ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿನಯ್ ಗುರೂಜಿ ಉದ್ಘಾಟಿಸಿದರು.
ಗೌರಿಗದ್ದೆಯಲ್ಲಿ ತಿರುಮಲ ಲಕ್ಷ್ಮೀವೆಂಕಟರಮಣ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿನಯ್ ಗುರೂಜಿ ಉದ್ಘಾಟಿಸಿದರು.   

ಕೊಪ್ಪ: ‘ನಮ್ಮ ಆಶ್ರಮದಲ್ಲಿ ಜಾತಿ, ಮತ, ಮಡಿ, ಮೈಲಿಗೆ ಎಂಬುದು ಇಲ್ಲ. ಎಲ್ಲಾ ಧರ್ಮದ ಮೂಲ ಒಂದೆ, ಅದು ಮಾನವ ಧರ್ಮ’ ಎಂದು ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ವಿನಯ್ ಗುರೂಜಿ ಹೇಳಿದರು.

ತಾಲ್ಲೂಕಿನ ಮೇಲುಬಿಳ್ರೆ ಗ್ರಾಮದ ಗೌರಿಗದ್ದೆಯಲ್ಲಿ ಸೋಮವಾರ ತಿರುಮಲ ಲಕ್ಷ್ಮೀವೆಂಕಟರಮಣ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಕ್ತರಲ್ಲಿ ಭಗವಂತನನ್ನು ನೋಡುವುದು ಗಾಂಧಿ ಸಂಪ್ರದಾಯ. ಗುಂಡು ಹೊಡೆದವನಿಗೂ ರಾಮನಾಮ ಹೇಳಿ ಪ್ರಾಣಬಿಟ್ಟವರು ಗಾಂಧೀಜಿ ಮಾತ್ರ’ ಎಂದರು.

ADVERTISEMENT

‘ಸೇವಾಶ್ರಮ ವತಿಯಿಂದ ಶ್ರದ್ಧಾಕೇಂದ್ರ ಸರಿಪಡಿಸುವುದು, ಗಾಂಧಿ ಕುಟೀರ ನಿರ್ಮಾಣ, ಕಲ್ಯಾಣೋತ್ಸವ, ಗಿಡಗಳನ್ನು ಬೆಳೆಸುವುದು, ಪರಿಸರ ಸ್ವಚ್ಛತೆಗೆ ಹೆಚ್ಚಿನ ಒತ್ತುಕೊಡಲಾಗಿದೆ. ಮುಂದೆ ಗೌರಿಗದ್ದೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು. ಎಲೆಚುಕ್ಕಿ ರೋಗ ಪೀಡಿತ ಅಡಿಕೆ ತೋಟದ ಕೃಷಿಕ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಲಾಗುವುದು’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ತಿರುಪತಿ ನೆಲದಿಂದ ಮೃತ್ತಿಕೆ ತಂದು ಇಲ್ಲಿ ವೆಂಕಟರಮಣ ದೇವಸ್ಥಾನ ನಿರ್ಮಿಸಿರುವುದರಿಂದ ಭಕ್ತರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಮಾತನಾಡಿ, ‘ವಿಭಿನ್ನತೆಯಲ್ಲಿ ಏಕತೆ ಕಂಡ ರಾಷ್ಟ್ರ ಭಾರತ’ ಎಂದರು.

ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ‘ಅವಧೂತರಲ್ಲಿ ಜಾತಿ, ಮತ, ಪಂಥ ಬರುವುದಿಲ್ಲ. ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ಮುದ್ದೇನಹಳ್ಳಿ ಸತ್ಯ ಸಾಯಿ ಬಾಬಾ ಟ್ರಸ್ಟ್ ನ ಮುಖ್ಯಸ್ಥ ಗೋವಿಂದ ರೆಡ್ಡಿ, ತಮಿಳುನಾಡಿನ ಬಿಜೆಪಿ ಎಸ್ಸಿ ಮೋರ್ಚಾದ ಉಸ್ತುವಾರಿ ವೆಂಕಟೇಶ್ ಮೌರ್ಯ, ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿದರು.

ದತ್ತಾಶ್ರಮ ವತಿಯಿಂದ ಗುತ್ಯಮ್ಮ ದೇವಸ್ಥಾನಕ್ಕೆ ಘಂಟೆ ವಿತರಿಸಲಾಯಿತು. ಅಪಘಾತ ಚಿಕಿತ್ಸೆಗಾಗಿ ಕಿಬ್ಳಿ ರಾಕೇಶ್ ಅವರಿಗೆ ₹25 ಸಾವಿರ, ಮನೆ ನಿರ್ಮಾಣಕ್ಕಾಗಿ ರಾಧಾ ಮತ್ತು ಮಹೇಶ್ ಎಂಬುವರಿಗೆ ಸಹಾಯಧನ ನೀಡಲಾಯಿತು. ಮೂರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಯಿತು.

ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ ಬಳಿಕ ಪೂರ್ಣಾಹುತಿ ನೆರವೇರಿಸಲಾಯಿತು. ವಾಸುದೇವ ಜೋಯಿಸ್ ಹಾಗೂ ದೇವಸ್ಥಾನದ ಸೇವಾ ಸಮಿತಿ ಗೌರವಾಧ್ಯಕ್ಷರಾದ ಗೀತಾ ಶಿವಪ್ಪ ನಾಯಕ್ ದಂಪತಿಯನ್ನು ಗೌರವಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಸ್.ಸುಧಾಕರ್, ಕೆ.ಎಸ್. ಸತೀಶ್ ಕಲ್ಮಕ್ಕಿ, ದತ್ತಾಶ್ರಮದ ಟ್ರಸ್ಟಿ ಕೋಣಂದೂರು ಪ್ರಕಾಶ್, ಮಿಥುನ್, ಮಾಲತೇಶ್, ಸೇವಾ ಸಮಿತಿ ಗೌರವಾಧ್ಯಕ್ಷರಾದ ಗೀತಾ ಶಿವಪ್ಪ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.