ADVERTISEMENT

ವಸತಿ ರಹಿತರ ಪಟ್ಟಿಯಲ್ಲಿ ಅನರ್ಹರ ಹೆಸರು: ಎಚ್.ಕೆ.ದಿನೇಶ್ ಹೊಸೂರು ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:12 IST
Last Updated 4 ಫೆಬ್ರುವರಿ 2026, 3:12 IST
ದಿನೇಶ್
ದಿನೇಶ್   

ಕೊಪ್ಪ: ಪಟ್ಟಣ ಪಂಚಾಯಿತಿಯ ವಸತಿ ರಹಿತರ ಪಟ್ಟಿಯಲ್ಲಿ ಅನರ್ಹರ ಹೆಸರನ್ನು ಸೇರಿಸಿ ಹೊಸ ಪಟ್ಟಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅಂತಿಮಗೊಳಿಸಿದ್ದಾರೆ. ನೈಜ ಫಲಾನುಭವಿಗಳಿಗೆ ನಿವೇಶನ ನೀಡದಿದ್ದರೆ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಬೇಕು. 2023ರಲ್ಲಿ ಶಾಸಕ ರಾಜೇಗೌಡ ಅಂತಿಮಗೊಳಿಸಿದ ಪಟ್ಟಿಯಲ್ಲಿ 18 ಫಲಾನುಭವಿಗಳ ಹೆಸರನ್ನು ಬಿಟ್ಟು 2026ರಲ್ಲಿ ಹೊಸ ಪಟ್ಟಿ ಬಿಡುಗಡೆ ಮಾಡಿ ಅನರ್ಹರಿಗೂ ನಿವೇಶನ ನೀಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು.

ಪಟ್ಟಣದ ವಸತಿ ರಹಿತರ ಸಂಖ್ಯೆ ಹೆಚ್ಚುತ್ತಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಖಾಸಗಿ ಜಾಗವನ್ನು ಖರೀದಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಬಹುದು, ಆದರೇ ಶಾಸಕರು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ADVERTISEMENT

‘ಡಿ.ಎನ್.ಜೀವರಾಜ್ ಶಾಸಕರಾಗಿದ್ದಾಗ, ನೋಡಲ್ ಅಧಿಕಾರಿ ನೇಮಕ ಮಾಡಿ ಪಟ್ಟಣದಲ್ಲಿ ಮನೆಗಳ ಸರ್ವೆ ಮಾಡಿಸಿ ವಸತಿ ರಹಿತರ ಪಟ್ಟಿ ಮಾಡಿಸಿದ್ದರು. ಆ ಸಂದರ್ಭದಲ್ಲಿ ನಿವೇಶನ ರಹಿತರಿಗೆ 2 ಎಕರೆ ಜಾಗ ಕಾಯ್ದಿರಿಸಲಾಗಿತ್ತು. ಇದೇ ಜಾಗದಲ್ಲಿ ಈಗ ಶಾಸಕರು ಹೊಸದಾಗಿ ಅರ್ಜಿ ಪಡೆದು ಅವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಉದಯ್ ಕುಮಾರ್ ಜೈನ್ ಮಾತನಾಡಿ, ಜೀವರಾಜ್ ಶಾಸಕರಾಗಿದ್ದಾಗ ನೈಜ 120 ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಆಗ ಪೌರ ಕಾರ್ಮಿಕರಿಗೆ, ಅಂಗವಿಕಲರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು. ರಾಜೇಗೌಡ ಅವರು ಶಾಸಕರಾದ ನಂತರ ಸರಿಯಾಗಿ ಆಶ್ರಯ ಸಮಿತಿ ಸಭೆ ನಡೆಸಿಲ್ಲ. 2023ರಲ್ಲಿ ಆಶ್ರಯ ಸಮಿತಿ ಸಭೆ ನಡೆಸಿ ಸ್ವಾತಂತ್ರ್ಯ ದಿನದಂದು ಹಕ್ಕುಪತ್ರ ವಿತರಿಸುವುದಾಗಿ ಹೇಳಿ, ಮೂರು ಸ್ವಾತಂತ್ರ್ಯ ದಿನ ಕಳೆದರೂ ಹಕ್ಕುಪತ್ರ ವಿತರಿಸಿಲ್ಲ ಎಂದು ದೂರಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ದಿವಾಕರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್, ಗಾಯತ್ರಿ ವಸಂತ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಸೂಯಾ ಕೃಷ್ಣಮೂರ್ತಿ, ಪಕ್ಷದ ಮುಖಂಡರಾದ ಎಚ್.ಎಂ.ರವಿಕಾಂತ್, ಅರುಣ್ ಶಿವಪುರ, ರೇವಂತ್ ಗೌಡ, ಬಿಷೇಶ್ ಭಟ್, ಪದ್ಮಾವತಿ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.