
ನರಸಿಂಹರಾಜಪುರ: ಪ್ರತಿಯೊಬ್ಬರ ಮೇಲೂ ಸಮಾಜದ ಋಣವಿದ್ದು, ಆ ಋಣ ತೀರಿಸುವ ನಿಟ್ಟಿನಲ್ಲಿ ಸಮಾಜಸೇವೆ ಮಾಡಬೇಕು ಎಂದು ಬೆಂಗಳೂರಿನ ಲೇಖಕ ಕೆ.ಪಿ.ಪುತ್ತೂರಾಯ ಅಭಿಪ್ರಾಯಪಟ್ಟರು.
ಪಟ್ಟಣದ ಎಲ್.ಎಫ್ ಚರ್ಚ್ ಸಭಾಂಗಣದಲ್ಲಿ ಶನಿವಾರ ನಡೆದ ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ಡಿನ ವಲಯ 15ರ ಆಶ್ರಯದಲ್ಲಿ ನಡೆದ ‘ಪ್ರಾಂತೀಯ ಸಮ್ಮೇಳನ ಕರುಣೆ’ಯಲ್ಲಿ ಅವರು ಉಪನ್ಯಾಸ ನೀಡಿದರು.
ಸಮಾಜ ಸೇವೆ ಮಾಡಲು ಮನಸ್ಸು, ಅವಕಾಶ, ಹಣಬೇಕು. ಸತ್ ಪಾರ್ಥರಿಗೆ ಸಕಾಲದಲ್ಲಿ ಸಂತೋಷದಿಂದ, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಸೇವೆ ಮಾಡಬೇಕು. ಆವಾಗ ತೃಪ್ತಿ ಲಭಿಸುತ್ತದೆ ಎಂದರು.
ಜೀವನವನ್ನು ಸಾರ್ಥಕತೆಗೊಳಿಸಲು ವೃತ್ತಿ, ವೈಯಕ್ತಿಕ, ಸಾಮಾಜಿಕ ಹಾಗೂ ಸಾಂಸ್ಕಾರಿಕ ಜೀವನ ಉತ್ತಮಾಗಿರಬೇಕು. ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಪರಿಣಿತಿಯಿರಬೇಕು, ವೃತ್ತಿಯನ್ನು ಗೌರವಿಸಬೇಕು ಹಾಗೂ ಪ್ರೀತಿಸಬೇಕು. ವೃತ್ತಿ ವಾಣಿಜ್ಯೀಕರಣವಾಗದೆ ಸಂಪಾದನೆ ನ್ಯಾಯ ಸಮ್ಮತ, ಧರ್ಮ ಸಮ್ಮತವಾಗಿರಬೇಕು. ಸಂಘ–ಸಂಸ್ಥೆಯಲ್ಲಿದ್ದವರು ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಜಾತಿ ಯಾರ ಆಯ್ಕೆಯೂ ಅಲ್ಲ. ರಕ್ತಕ್ಕೆ ಜಾತಿಯಿಲ್ಲ. ಜಾತಿ ಮನೆಯೊಳಗೆ ಬಿದ್ದಿರಬೇಕು. ಜಾತ್ಯಾತೀತ ಮನೋಭಾವನೆಯಿರಬೇಕು ಎಂದು ಅವರು ಹೇಳಿದರು.
ಸಮಾಜ ಸೇವಕ ಗದ್ದೆಮನೆ ವಿಶ್ವನಾಥ್ ಮಾತನಾಡಿ, ‘ಜೀವನದಲ್ಲಿ ಮಹತ್ವವಾದುದು ಸೇವೆಯಾಗಿದೆ. ಹಣ, ಅಧಿಕಾರ, ಸ್ಥಾನ ಎಲ್ಲವೂ ತಾತ್ಕಾಲಿಕ. ಸೇವೆ ಮಾಡುವುದರಿಂದ ಆತ್ಮತೃಪ್ತಿ ಲಭಿಸುತ್ತದೆ. ಲಯನ್ಸ್ ಸಂಸ್ಥೆ ಸೇವೆ ಮಾಡುವ ಮೂಲಕ ಜನಮಾನಸದಲ್ಲಿದೆ. ಲಯನ್ಸ್ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಯಲ್ಲ. ಸೇವೆ ಜಾತಿ–ಧರ್ಮ–ಭಾಷೆಯನ್ನು ನೋಡಿ ಮಾಡದೆ, ಮಾನವನಾಗಿ, ಮಾನವನಿಗೆ ನೆರವಾಗುವುದೇ ಇದರ ಉದ್ದೇಶ’ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಲಯನ್ಸ್ ಸಂಸ್ಥೆ ಸುಮಾ ಸಿಜು ಮಾತನಾಡಿ, ಇನ್ನೊಬ್ಬರ ನೋವನ್ನು ಅರಿತು ಸಹಾಯ ಮಾಡುವ ಮಾನವೀಯತೆಯೇ ಕರುಣೆ. ಸೇವೆಯಲ್ಲಿ ಬೆಳಕು, ಶಾಂತಿ, ಸಮೃದ್ಧಿ ಭರವಸೆ ತುಂಬುವಂತಾಗಬೇಕು ಎಂದರು.
ಲಯನ್ಸ್ ಸಂಸ್ಥೆ ವಲಯ 15ರ ಅಧ್ಯಕ್ಷ ಪಿ.ಸಿಜು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಎಚ್.ಎಂ. ತಾರನಾಥ್, ಲಯನ್ಸ್ ಸಂಸ್ಥೆಯ ಎಚ್.ಜಿ. ವೆಂಕಟೇಶ್, ಪಿ.ಜೆ. ಅಂಟೋಣಿ, ಕೆ.ಟಿ. ಎಲ್ದೊ, ಡಿ. ಸಜಿ, ಎಂ.ಪಿ. ಸನ್ನಿ, ಎಂ.ಟಿ. ಶಂಕರಪ್ಪ, ಡಿ. ರಮೇಶ್, ಜೇಮ್ಸ್, ಎಸ್.ಎಸ್. ಸಂತೋಷ್ ಕುಮಾರ್, ಪ್ರಶಾಂತ್, ದಕ್ಷಿಣಮೂರ್ತಿ, ವಿವಿಧ ತಾಲ್ಲೂಕಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಕೊಪ್ಪ ಲಯನ್ಸ್ ಕ್ಲಬ್ನ ಡಯಾಲಿಸಿಸ್ ಸೇವಾ ನಿಧಿಗೆ ₹10 ಸಾವಿರ ದೇಣಿಗೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.