ADVERTISEMENT

ಬೀರೂರು | ತೋಟ, ಜಮೀನಿಗೆ ನುಗ್ಗಿದ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 14:18 IST
Last Updated 8 ಆಗಸ್ಟ್ 2024, 14:18 IST
ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಗುರುವಾರ ಗಾಳಿಹಳ್ಳಿ ಕೆರೆಯ ನೀರು ಹರಿದು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು
ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಗುರುವಾರ ಗಾಳಿಹಳ್ಳಿ ಕೆರೆಯ ನೀರು ಹರಿದು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು    

ಬೀರೂರು: ಮದಗದಕೆರೆ ಕೋಡಿಬಿದ್ದ ಬೆನ್ನಲ್ಲೆ, ಈ ಕೆರೆಯ ನೀರನ್ನು ಆಶ್ರಯಿಸಿರುವ ಸರಣಿ ಕೆರೆಗಳು ಒಂದೊಂದೇ ಭರ್ತಿಯಾಗುತ್ತಿದ್ದು, ಸಮೀಪದ ಅಡಿಕೆ ತೋಟ, ಜಮೀನಿಗೆ ನೀರು ನುಗ್ಗಿದೆ.

ಬೀರೂರು ಹೊರವಲಯದ ಖರೀದಿಯವರ ಕಟ್ಟೆ ಬಳಿಯ ಕೆರೆ (ಗಾಳಿಹಳ್ಳಿ ಕೆರೆ)  ಕೋಡಿ ಬಿದ್ದು, ಅದರಿಂದ ಹರಿದು ಬರುತ್ತಿರುವ ನೀರು ಅಜ್ಜಂಪುರ ರಸ್ತೆ, ಯಗಟಿ ರಸ್ತೆಯ ಜಮೀನು, ತೋಟಗಳಿಗೆ ನುಗ್ಗಿತು. ರಹೀಂಸಾಬ್‌ ಲೇಔಟ್‌ನಲ್ಲಿ ಕೆರೆ ನೀರು ಹರಿದು ಜನರು ತೊಂದರೆ ಅನುಭವಿಸಿದರು. ಗುರುವಾರ ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳು, ಜಮೀನು, ತೋಟಗಳಿಗೆ ಕೆಲಸಕ್ಕೆ ತೆರಳುವ ರೈತರು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸಿದರು. 

ಮಳೆ ನೀರು ಹರಿದು ಹೋಗಲು ರಹೀಂಸಾಬ್‌ ಲೇಔಟ್‌ ಪಕ್ಕದಲ್ಲಿ ಹಿಂದೆ ರಾಜಕಾಲುವೆ ಇತ್ತು. ಆದರೆ, ಅಜ್ಜಂಪುರ ರಸ್ತೆಯಲ್ಲಿ  ಶಿವಮೊಗ್ಗ ಬೈಪಾಸ್‌ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರಾಜಕಾಲುವೆಯನ್ನು ಸರಿಯಾಗಿ ಗುರುತಿಸದೆ ಸಣ್ಣ ತೂಬು ಅಳವಡಿಸಿದ್ದರಿಂದ ನೀರಿನ ಹರಿವಿಗೆ ಅಡಚಣೆಯಾಯಿತು. ಕೆಲವರು ಕಾಲುವೆ ಮುಚ್ಚಿ ಅಲ್ಲಿ ಕೃಷಿ ಮಾಡಲು ಮುಂದಾಗಿದ್ದರಿಂದ ಈಗ ನೀರು ಹರಿಯಲು ಜಾಗವಿಲ್ಲದೆ ಜನವಸತಿ ಪ್ರದೇಶದೊಳಗೆ ನುಗ್ಗುತ್ತಿದೆ ಎಂದು ಸ್ಥಳೀಯರು ದೂರಿದರು.

ADVERTISEMENT

ಕಡೂರು ತಹಶೀಲ್ದಾರ್‌ ಪೂರ್ಣಿಮಾ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್‌. ಪ್ರವೀಣ್‌ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಳಿಹಳ್ಳಿ ಕೆರೆಯಿಂದ ಕರ್ಲಹಳ್ಳದವರೆಗೆ ಕಾಲುವೆ ನಿರ್ಮಿಸಿ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರಾದ ಜಿ.ಪಿ.ನವೀನ್‌ ಮನವಿ ಮಾಡಿದರು.

‘ಕೆರೆ ನೀರಿನಿಂದ ಹಾನಿ ಸಂಭವಿಸಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಪರಿಹಾರ ನೀಡಲಾಗುವುದು, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಹೇಳಿದರು.

 ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಕಡೂರು ತಹಶೀಲ್ದಾರ್‌ ಪೂರ್ಣಿಮಾ ಮತ್ತು ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್‌ಕುಮಾರ್‌ ಗುರುವಾರ ಪರಿಶೀಲಿಸಿ ಮಾಹಿತಿ ಪಡೆದರು. ಪಿಎಸ್‌ಐ ಸಜಿತ್‌ಕುಮಾರ್‌ ಮತ್ತು ನಾಗರಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.