ADVERTISEMENT

ಭೂವಿವಾದಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಪರಿಶಿಷ್ಟ ಕುಟುಂಬಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 4:34 IST
Last Updated 1 ಆಗಸ್ಟ್ 2022, 4:34 IST
   

ಕಳಸ: ಭೂವಿವಾದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕಲ್ಲುಕುಡಿಗೆ ಪ್ರದೇಶದ ಮೂರು ಪರಿಶಿಷ್ಟ ಕುಟುಂಬಗಳು ದಯಾ ಮರಣಕ್ಕೆ ಅರ್ಜಿ ಸಲ್ಲಿಸಿವೆ.

ಕೆ.ಆರ್.ರಾಘವ, ಕೆ.ಆರ್.ವಿದ್ಯಾನಂದ, ಕೆ.ಆರ್.ಗಣೇಶ ಎಂಬುವರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

‘ಐದು ದಶಕಗಳಿಂದ ನಾವು ಕಲ್ಲುಕುಡಿಗೆ ಪ್ರದೇಶದಲ್ಲಿ ಕೃಷಿ ಮಾಡುತ್ತಾ ನೆಲೆಸಿದ್ದೇವೆ. ಇಲ್ಲಿನ ಪ್ರಭಾವಿ ವ್ಯಕ್ತಿಗಳು ನಮ್ಮನ್ನು ಒಕ್ಕಲೆಬ್ಬಿಸುವ ಯತ್ನವನ್ನು ಸತತವಾಗಿ ಮಾಡುತ್ತಿದ್ದಾರೆ. ಇದರಿಂದ ಜೀವನದಲ್ಲಿ ಜಿಗುಪ್ಸೆ ಆಗಿದ್ದು ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

‘ನಮ್ಮ ಮನೆಯ ನಿವೇಶನಕ್ಕೆ ಸರ್ಕಾರವೇ ಹಕ್ಕುಪತ್ರ ಕೊಟ್ಟಿದೆ. ನಾವು ಮೂವರು ಸೇರಿ ಸಾಗುವಳಿ ಮಾಡಿರುವ ಒಂದೂವರೆ ಎಕರೆ ಭೂಮಿಗೆ ಫಾರಂ ನಂಬರ್ 57ರಲ್ಲಿ ಅರ್ಜಿ ಕೂಡ ಸಲ್ಲಿಸಿದ್ದೇವೆ. ಆದರೆ, ಬಿಜೆಪಿ ಮುಖಂಡರೂ ಆಗಿರುವ ಪ್ರಭಾವಿ ವ್ಯಕ್ತಿಗಳು ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಸತತ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಅನೇಕ ಮನವಿ ಮಾಡಿದರೂ ಯಾವುದೆ ಪ್ರಯೋಜನ ಆಗಿಲ್ಲ’ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದಾರೆ.

‘ನಮ್ಮ ಮೂರು ಗುಡಿಸಲುಗಳಿಗೆ ತಲುಪಲು ಹಳ್ಳದ ಪಕ್ಕದ ರಸ್ತೆ ಬಳಸುತ್ತಿದ್ದೇವೆ. ಆದರೆ, ಈ ರಸ್ತೆ ಖಾಸಗಿ ರಸ್ತೆ ಎಂಬ ಬೋರ್ಡ್ ಹಾಕಿದ್ದಾರೆ. ನಮ್ಮ ಮಕ್ಕಳು ಶಾಲಾ ಕಾಲೇಜಿಗೆ ಹೋಗುವಾಗ ಇವರ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. 20 ದಿನಗಳ ಒಳಗೆ ನಮ್ಮ ದಯಾಮರಣದ ಪತ್ರಕ್ಕೆ ಉತ್ತರ ನೀಡದಿದ್ದರೆ ನಮ್ಮ ಸಾವಿಗೆ ಸರ್ಕಾರವೇ ಹೊಣೆ’ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.