ADVERTISEMENT

ಕಡೂರು | ಚಿರತೆಗಳ ದಾಳಿಗೆ ಜಾನುವಾರುಗಳು ಬಲಿ; ಬೋನು ಇಟ್ಟ ಅರಣ್ಯ ಇಲಾಖೆ

ಚಿರತೆ ದಾಳಿಗೆ ಜಾನುವಾರುಗಳು ಬಲಿ; ಬೋನು ಇಟ್ಟ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 5:10 IST
Last Updated 4 ಡಿಸೆಂಬರ್ 2022, 5:10 IST
ನಗದಿಯಾತ್ ಕಾವಲಿನಲ್ಲಿ ಚಿರತೆ ಹಿಡಿಯಲು ಬೋನ್ ಇಟ್ಟಿರುವುದು.
ನಗದಿಯಾತ್ ಕಾವಲಿನಲ್ಲಿ ಚಿರತೆ ಹಿಡಿಯಲು ಬೋನ್ ಇಟ್ಟಿರುವುದು.   

ಕಡೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಚಿರತೆಗಳು ಓಡಾಡುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ಜೋಡಿಲಿಂಗದ ಹಳ್ಳಿ, ಸಖರಾಯಪಟ್ಟಣ, ಬಾಣೂರು, ಕಡೂರು ಪಟ್ಟಣದ ಹೊರವಲಯದ ನಗದಿಯಾತ್ ಕಾವಲು, ಪಂಚನಹಳ್ಳಿ ಬಳಿಯ ದೊಡ್ಡನಕಟ್ಟೆ, ಎಚ್.ಎಂ.ಕಾವಲು, ತಂಗಲಿ ಕಾಡು ಪ್ರದೇಶ, ಹೇಮಗಿರಿಯ ಬೆಟ್ಟ, ಬೀರೂರು ಅಮೃತ ಮಹಲ್ ಕಾವಲು ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಸುತ್ತತಲಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿರುವುದನ್ನು ಕಂಡು ಜನರು ಭಯಭೀತರಾಗಿದ್ದಾರೆ.

ಹಿರೇನಲ್ಲೂರು ಬಳಿಯ ಗ್ರಾಮವೊಂದರಲ್ಲಿ ಚಿರತೆ ಹಸುವೊಂದನ್ನು ಹಿಡಿಯಲು ಪ್ರಯತ್ನಿಸಿ ಪರಾರಿಯಾಗಿದ್ದು, ಹಸು ಮೃತಪಟ್ಟಿದೆ. ಬಾಸೂರು ಕಾವಲಿನಲ್ಲಿ ಅಮೃತಮಹಲ್ ಕರುವೊಂದು ಚಿರತೆ ದಾಳಿಗೆ ಮೃತಪಟ್ಟಿದೆ. ಎಂ.ಚೋಮನಹಳ್ಳಿಯಲ್ಲಿ ಹಾಲಪ್ಪ ಎಂಬುವವರ ಕರುವೊಂದು ಚಿರತೆಗೆ ಬಲಿಯಾಗಿದೆ.

ADVERTISEMENT

ಈ ಪ್ರದೇಶಗಳಲ್ಲಿ ಎರಡು ಅಥವಾ ಮೂರು ಚಿರತೆಗಳು ಓಡಾಡುತ್ತಿವೆ ಎನ್ನಲಾಗಿದೆ. ಈವರೆಗೆ ಮನುಷ್ಯರ ಮೇಲೆ ದಾಳಿ ನಡೆದಿಲ್ಲ. ಆದರೆ,ರೈತರಿಗೆ ಭೀತಿ ತಪ್ಪಿಲ್ಲ.

ಈಗಾಗಲೇ ನಗದಿಯಾತ್ ಕಾವಲು, ಬಾಸೂರು ಕಾವಲು ಸೇರಿದಂತೆ ಮೂರು ಕಡೆ ಅರಣ್ಯ ಇಲಾಖೆಯಿಂದ ಬೋನ್ ಇಡಲಾಗಿದೆ. ಆದರೆ ಚಿರತೆ ಸೆರೆಯಾಗಿಲ್ಲ.

ಡಿಎಫ್‌ಒ ಕ್ರಾಂತಿ ಅವರ ನೇತೃತ್ವದಲ್ಲಿ ಮೂರು ಬೋನುಗಳ ವ್ಯವಸ್ಥೆ ಮಾಡಲಾಗಿದೆ. ನಸುಕಿನಲ್ಲಿ ಹಾಗೂ ರಾತ್ರಿ ಹೊರಹೋಗುವವರು ಜಾಗರೂಕರಾಗಿರಬೇಕು. ಗುಂಪಿನಲ್ಲಿರುವುದು ಉತ್ತಮ. ಚಿರತೆ ಬಂದರೆ ಗಾಬರಿಯಾಗದೆ ತಟಸ್ಥವಾಗಿ ನಿಲ್ಲಿ. ಆಗ ಚಿರತೆ ದಾಳಿ ಮಾಡುವ ಸಂಭವ ಕಡಿಮೆ ಎಂದು ವಲಯ ಅರಣ್ಯಾಧಿಕಾರಿ ಲೋಕೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.