
ಕಡೂರು: ‘ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶಗಳಿವೆ ಎಂಬುದನ್ನು ಸ್ಮರಿಸಲು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ’ ಎಂದು ಕಡೂರು ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ತಿಳಿಸಿದರು.
ಪಟ್ಟಣದ ಕಾನ್ಫಿಡೆಂಟ್ ಪಿಯು ಕಾಲೇಜು ಸಭಾಂಗಣದಲ್ಲಿ ಸೋಮವಾರ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷವೂ ನ.9ರಂದು ಕಾನೂನು ಸೇವಾ ದಿನ ಆಚರಣೆಯ ರೂಢಿಯಲ್ಲಿದೆ. 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ದಿನ ಇದಾಗಿದೆ. ಬಲಿಷ್ಠರಿಗೆ, ಹಣವಿದ್ದವರಿಗೇ ನ್ಯಾಯ ದೊರೆಯುತ್ತದೆ ಎನ್ನುವ ಹುಸಿನುಡಿಯನ್ನು ಬದಲಿಸಲು ಆಕ್ಟ್ 42ನ್ನು ತಿದ್ದುಪಡಿ ಮಾಡಿ 39ʼಎ" ಅನುಷ್ಠಾನಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆ ಒದಗಿಸುವ ವ್ಯವಸ್ಥೆ ಜಾರಿಗೆ ಬಂದಿತು. ಪ್ರಾಧಿಕಾರವು ಮಹಿಳೆ, ಮಕ್ಕಳು, ಅಂಗವಿಕಲರು ಮತ್ತು ದೌರ್ಜನ್ಯಕ್ಕೆ ಒಳಗಾದವರು, ಮಾನವ ಕಳ್ಳಸಾಗಣೆಗೆ ತುತ್ತಾದವರಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಕಾನೂನು ಅರಿವು ಇದ್ದರೆ ಯಾರಿಂದಲೂ ಮೋಸ ಹೋಗಲು ಸಾಧ್ಯವಿಲ್ಲ. ಆಧುನಿಕ ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು ಎಲ್ಲರೂ ಕನಿಷ್ಟ ಕಾನೂನು ಅರಿವು ಇರಬೇಕು. ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು, ವಿದ್ಯಾರ್ಥಿನಿಯರು ಎಲ್ಲೇ ದೌರ್ಜನ್ಯ ಅಥವಾ ಅಕ್ರಮ ಚಟುವಟಿಕೆ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಮತ್ತು ಕಾನೂನು ಪ್ರಾಧಿಕಾರದ ಮೊರೆ ಹೋಗಿ ಪರಿಹಾರವನ್ನೂ ಪಡೆಯಬಹುದು ಎಂದು ಸಲಹೆ ನೀಡಿದರು.
ಕಾಲೇಜು ಪ್ರಾಚಾರ್ಯ ಸಂತೋಷ್ ಕುಮಾರ್ ಮಾತನಾಡಿದರು. ಜೆಎಂಎಫ್ಸಿ ಹೆಚ್ಚುವರಿ ನ್ಯಾಯಾಧೀಶ ತಹ ಖಲೀಲ್, ಉಪನ್ಯಾಸಕರಾದ ಚೇತನ್, ಅಭಿಷೇಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.