ಚಿಕ್ಕಮಗಳೂರು: ‘ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸ್ಥಳೀಯ ನಾಯಕತ್ವ ಫೋಕಸ್ ಮಾಡದೇ ಇದ್ದದ್ದು ಬಿಜೆಪಿ ಸೋಲಿಗೆ ಕಾರಣ ಇರಬಹುದು. ಕೊರತೆಗಳು ಏನು ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಅವಲೋಕನ ಮಾಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೆಲುವು ಮತ್ತು ಸೋಲನ್ನ ಸಮಾನವಾಗಿ ಸ್ವೀಕರಿಸುವ ಭಾವನೆ ಇರಬೇಕು. ದೆಹಲಿ ವಿಧಾನಸಭೆ ಚುನಾವಣೆಯ ಜನಾದೇಶವನ್ನು ಸ್ವಾಗತಿಸುತ್ತೇವೆ. ಇದು ಮೋದಿ ವಿರುದ್ಧದ ಜನಾದೇಶ ಅಲ್ಲ. ಸಾಂದರ್ಭಿಕವಾಗಿ ಕೇಜ್ರಿವಾಲ್ ಪರವಾಗಿ ಜನಾದೇಶ ವ್ಯಕ್ತವಾಗಿರಬಹುದು’ ಎಂದು ಉತ್ತರಿಸಿದರು.
‘ಎಲ್ಲ ಕಡೆಯೂ ‘ಮ್ಯಾಜಿಕ್’ ವರ್ಕ್ಔಟ್ ಆಗಲ್ಲ. ಕೇಂದ್ರದ ನಾಯಕತ್ವ, ಪಕ್ಷದ ಸಂಘಟನೆ, ಸ್ಥಳೀಯ ಅಂಶಗಳು, ನೇತೃತ್ವ ಚುನಾವಣೆ ಫಲಿತಾಂಶದಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಸಂಭ್ರಮಿಸುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ’ ಎಂದರು.
‘ಮೀಸಲಿಟ್ಟ ಅನುದಾನದಲ್ಲಿ ಜಿಲ್ಲಾ ಉತ್ಸವ ಆಯೋಜನೆ’
‘ಜಿಲ್ಲಾ ಉತ್ಸವವಕ್ಕೆ ₹ 2.6 ಕೋಟಿ ವೆಚ್ಚದ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಉತ್ಸವಕ್ಕಾಗಿ ಮೀಸಲಿಟ್ಟ ಅನುದಾನವನ್ನು ಮಾತ್ರ ಬಳಸಲಾಗುವುದು. ಪಂಚಾಯಿತಿ ಪಾರ್ಲಿಮೆಂಟ್ವರೆಗೆ ಬಿಜೆಪಿಯೇ ಗೆದಿದ್ದೆ, ಹೀಗಾಗಿ ಉತ್ಸವದ ಸಮಿತಿಗಳಲ್ಲಿ ಬಿಜೆಪಿಯವರಿಗೆ ಪ್ರಾಧಾನ್ಯ ಸಿಕ್ಕಿದೆ’ ಎಂದು ಸಚಿವ ರವಿ ಸಮರ್ಥಿಸಿಕೊಂಡರು.
‘ಎಲ್ಲರೂ ಜೋಡಿಸಿಕೊಳ್ಳಲು ತಯಾರಿದ್ದೇವೆ. ಯಾರನ್ನೂ ದೂರ ಇಟ್ಟು ಜಿಲ್ಲಾ ಉತ್ಸವ ಮಾಡುವ ಉದ್ದೇಶ ಇಲ್ಲ. ವಿರೋಧಿಸುವವರನ್ನು ಎದುರಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
ಮಂಗನ ಕಾಯಿಲೆ ಹರಡದಂತೆ ನಿಗಾ ವಹಿಸಲು ಸೂಚನೆ
‘ಎನ್.ಆರ್.ಪುರ ತಾಲ್ಲೂಕಿನ ಮಡಬೂರಿನಲ್ಲಿ ಅಸ್ಸಾಂನ ಮೂವರು ಕಾರ್ಮಿಕರಿಗೆ ಮಂಗನ ಕಾಯಿಲೆ (ಕೆಎಫ್ಡಿ) ಪತ್ತೆಯಾಗಿದೆ. ಮಂಗನ ಕಾಯಿಲೆ ಹರಡದಂತೆ ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯಧಿಕಾರಿಗೆ ಸೂಚನೆ ನೀಡಿದ್ದೇನೆ. ಕೊರೊನಾ ವೈರಸ್ ನಿಟ್ಟಿನಲ್ಲಿ ಕೇರಳ ಪ್ರವಾಸಿಗರ ಮೇಲೆ ನಿಗಾ ಇಡುವಂತೆ ಸೂಚಿಸಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.