ಚಿಕ್ಕಮಗಳೂರು: ಹಾಜರಾತಿ ಪುಸ್ತಕ, ಹಣಕಾಸಿನ ಪುಸ್ತಕ, ಕರ್ತವ್ಯ ನಿಮಿತ್ತ ಹೊರ ಹೋಗಿರುವ ರಿಜಿಸ್ಟರ್ ಪುಸ್ತಕ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳನ್ನು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತರಾಟೆಗೆ ತೆಗೆದುಕೊಂಡರು.
ನಗರಸಭೆ ಕಚೇರಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ಮೊದಲಿಗೆ ಎಲ್ಲಾ ಹಾಜರಾತಿ ಪುಸ್ತಕಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುವ ಎಲ್ಲಾ ಸಿಬ್ಬಂದಿಯೂ ತಮ್ಮ ಬಳಿ ವೈಯಕ್ತಿಕ ನಗದು ಎಷ್ಟಿದೆ ಎಂಬುದನ್ನು ಕ್ಯಾಷ್ ರಿಜಿಸ್ಟರ್ನಲ್ಲಿ ನಮೂದಿಸಬೇಕು. ಕಾರ್ಯ ನಿಮಿತ್ತ ಕಚೇರಿಯಿಂದ ಹೊರಗೆ ಹೋಗಿದ್ದರೆ ಮೂಮೆಂಟ್ ರಿಜಿಸ್ಟರ್ನಲ್ಲಿ ನಮೂದಿಸಬೇಕು. ಆದರೆ, ಹಲವರು ಹಣ ಎಷ್ಟಿದೆ ಎಂಬುದನ್ನು ಬೆಳಿಗ್ಗೆ ಮಾತ್ರ ನಮೂದಿಸಿದ್ದು, ಸಂಜೆ ಹೋಗುವಾಗ ಎಷ್ಟಿದೆ ಎಂಬುದನ್ನು ನಮೂದಿಸಿರಲಿಲ್ಲ.
ಅದರಲ್ಲೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೇಶ್ ಅವರು ಹಲವು ದಿನಗಳಿಂದ ಹಣಕಾಸಿನ ಮಾಹಿತಿಯನ್ನು ಸಂಜೆ ವೇಳೆ ನಮೂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ‘ಕ್ಯಾಷ್ ರಿಜಿಸ್ಟರ್ ಪುಸ್ತಕ ಇರುವುದು ಏಕೆ, ಇಲ್ಲಿ ನಮೂದಿಸದ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ. ಎಷ್ಟು ಜನರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಬಂದಿರುವ ಉತ್ತರ ಏನು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರನ್ನು ಪ್ರಶ್ನಿಸಿದರು.
ಈ ಪುಸ್ತಕಗಳನ್ನು ನಿರ್ವಹಣೆ ಮಾಡಬೇಕಾದ ಕಚೇರಿ ವ್ಯವಸ್ಥಾಪಕ ರವಿ ಅವರನ್ನೂ ತರಾಟೆಗೆ ತೆಗೆದುಕೊಂಡರು. ಕ್ಯಾಷ್ ರಿಜಿಸ್ಟರ್ನಲ್ಲಿ ನಮೂದಿಸದ ಅಷ್ಟೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಷ್ಟೂ ಹಾಜರಾತಿ ಪುಸ್ತಕಗಳನ್ನು ವಶಕ್ಕೆ ಪಡೆದು ಜೆರಾಕ್ಸ್ ದೃಢೀಕೃತ ಪ್ರತಿ ಪಡೆದುಕೊಳ್ಳಲು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಜಿನಿಯರಿಂಗ್ ಶಾಖೆ, ಕಂದಾಯ ಶಾಖೆ, ಆರೋಗ್ಯ ಶಾಖೆ ಮತ್ತು ಲೆಕ್ಕಪತ್ರ ಶಾಖೆಗೆ ಭೇಟಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು. ‘ಕಚೇರಿ ನಿರ್ವಹಣೆಯ ಜವಾಬ್ದಾರಿ ವ್ಯವಸ್ಥಾಪಕರ ಮೇಲಿದೆ. ಯಾವ ಯಾವ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾದ ಜವಾಬ್ದಾರಿ ಅವರದೇ ಆಗಿದೆ. ಯಾವುದನ್ನೂ ಸಮರ್ಪಕವಾಗಿ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಂತಹ ಬೇಜವಾಬ್ದಾರಿ ವ್ಯವಸ್ಥಾಪಕ ಮತ್ತು ಕ್ಯಾಷ್ ರಿಜಿಸ್ಟರ್ನಲ್ಲಿ ನಮೂದಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ವರದಿ ನೀಡಬೇಕು. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಎಲ್ಲಾ ರಿಜಿಸ್ಟರ್ ಪುಸ್ತಕಗಳ ಪ್ರತಿ ಪಡೆಯಲಾಗಿದೆ. ಸುಳ್ಳು ಮಾಹಿತಿ ನೀಡಿದರೆ ಮತ್ತೆ ಕಷ್ಟಕ್ಕೆ ಸಿಲುಕಲಿದ್ದೀರಿ’ ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ‘ಆಸ್ಪತ್ರೆಯ ಬಯೋತ್ಯಾಜ್ಯವನ್ನು ಪ್ರತಿನಿತ್ಯ ತೆರವು ಮಾಡಲಾಗುತ್ತಿದೆಯೇ’ ಎಂದು ಪ್ರಶ್ನಿಸಿದರು.
‘ಹಾಸನದ ಖಾಸಗಿ ಕಂಪನಿಗೆ ನಿರ್ವಹಣೆಯ ಟೆಂಡರ್ ನೀಡಲಾಗಿದೆ. ಮೂರು ದಿನಗಳಿಗೊಮ್ಮೆ ಸಂಗ್ರಹ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಚಂದ್ರಶೇಖರ್ ಉತ್ತರಿಸಿದರು. ಇದಕ್ಕೆ ಅಸಮಾಧಾನಗೊಂಡ ಉಪಲೋಕಾಯುಕ್ತರು, ‘ಯಾವುದೇ ಕಾರಣಕ್ಕೂ ಬಯೋತ್ಯಾಜ್ಯವನ್ನು ಮೂರು ದಿನಕ್ಕೊಮ್ಮೆ ಸಂಗ್ರಹ ಮಾಡುವಂತಿಲ್ಲ. ಟೆಂಡರ್ ಪಡೆದವರಿಗೆ ನೋಟಿಸ್ ನೀಡಿ ಕ್ರಮ ತಗೆದುಕೊಂಡಿಲ್ಲ ಏಕೆ’ ಎಂದು ಪ್ರಶ್ನಿಸಿದರು.
ಕೂಡಲೇ ನೋಟಿಸ್ ನೀಡಿ ಮರು ಟೆಂಡರ್ ನೀಡಬೇಕು. ಪ್ರತಿದಿನವೂ ಸಂಗ್ರಹಿಸಿ ತೆರವು ಮಾಡಬೇಕು. ಒಳರೋಗಿ ವಿಭಾಗದಲ್ಲಿ ಸೊಳ್ಳೆಗಳ ಕಾಟವಿದ್ದು, ಕೂಡಲೇ ಕಿಟಕಿಗಳಿಗೆ ಪರದೆ ಹಾಕಿಸಬೇಕು ಎಂದು ಸೂಚನೆ ನೀಡಿದರು.
ಆಸ್ಪತ್ರೆಯ ಹಾಜರಾತಿ ಪುಸ್ತಕ, ಹಣಕಾಸಿನ ಪುಸ್ತಕ, ಕರ್ತವ್ಯ ನಿಮಿತ್ತ ಹೊರ ಹೋಗಿರುವ ರಿಜಿಸ್ಟರ್ ಪುಸ್ತಕದ ಸೂಕ್ತ ನಿರ್ವಹಣೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ಪುಸ್ತಕಗಳನ್ನು ವಶಕ್ಕೆ ಪಡೆದರು.
5 ವರ್ಷಗಳಿಂದ ತೆರೆಯದ ದೂರು ಪೆಟ್ಟಿಗೆ
ನಗರಸಭೆ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ಗೋಡೆಗೆ ದೂರು ಪೆಟ್ಟಿಗೆಯೊಂದನ್ನು ಇಡಲಾಗಿದ್ದು ಅದನ್ನು ಉಪಲೋಕಾಯುಕ್ತರು ಪರಿಶೀಲಿಸಿದರು. ಅದಕ್ಕೆ ಹಾಕಿರುವ ಬೀಗ ತೆರೆಯುವಂತೆ ಕಚೇರಿ ವ್ಯವಸ್ಥಾಪಕ ರವಿ ಅವರಿಗೆ ಸೂಚನೆ ನೀಡಿದರು. ದೂರು ಪೆಟ್ಟಗೆ ಕೀಲಿ ಕಳೆದುಹೋಗಿದೆ ಎಂದು ಅವರು ಉತ್ತರ ನೀಡಿದರು.
ರಿಪೇರಿ ಮಾಡುವ ಕೆಲಸಗಾರನ್ನು ಕರೆಸಿ ಲಾಕರ್ ಒಡೆದು ಪರಿಶೀಲಿಸಲಾಯಿತು. 2020ರಿಂದ ಈವರೆಗೆ ಸಾರ್ವಜನಿಕರು ಹಾಕಿರುವ ದೂರುಗಳು ಅದರಲ್ಲೇ ಇರುವುದನ್ನು ಕಂಡು ಉಪಲೋಕಾಯುಕ್ತರು ಸಿಡಿಮಿಡಿಗೊಂಡರು.
‘ಉದ್ಘಾಟನೆಯಾದ ದಿನದಿಂದ ಈ ಪೆಟ್ಟಿಗೆಯನ್ನು ತೆಗೆದಂತೆ ಕಾಣಿಸುತ್ತಿಲ್ಲ. ಅದರಲ್ಲಿರುವ ಪತ್ರಗಳು ಧೂಳು ಹಿಡಿದಿವೆ. ಈ ರೀತಿಯ ಬೇಜವಾಬ್ದಾರಿ ಅಧಿಕಾರಿಗಳನ್ನು ನಾನೆಲ್ಲೂ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಬೀಗವನ್ನೇ ತೆರೆಯದ ದೂರು ಪೆಟ್ಟಿಗೆಯನ್ನು ಇರಿಸಿರುವುದಾದರೂ ಏಕೆ ಈಗಲೇ ಈ ಪೆಟ್ಟಿಗೆ ತೆಗೆದು ಹೊಸ ಪೆಟ್ಟಿಗೆ ಇರಿಸಿ. ಇಲ್ಲಿರುವ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ತಿಳಿಸಿದರು.
‘ನಗರಸಭೆ ಕಚೇರಿಯಲ್ಲಿ ಸಾಕಷ್ಟು ಕಾರ್ಯವಿಧಾನದ ಲೋಪಗಳಿವೆ. ಪ್ರಾಥಮಿಕವಾಗಿ ಕಂಡಿರುವ ಲೋಪಗಳನ್ನು ಆಧರಿಸಿ ಸಮಗ್ರವಾಗಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಿ’ ಎಂದು ಲೋಕಾಯುಕ್ತ ಎಸ್ಪಿ ಸ್ನೇಹಾ ಅವರಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿ ಸೇರಿ 6 ಸ್ವಯಂ ಪ್ರೇರಿತ ಪ್ರಕರಣ
ರಸ್ತೆ ಗುಂಡಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಸೇರಿ ಆರು ಸ್ವಯಂ ಪ್ರೇರಿತ ಪ್ರಕರಣಗಳನ್ನು ಉಪಲೋಕಾಯುಕ್ತರು ದಾಖಲಿಸಿಕೊಂಡಿದ್ದಾರೆ. ‘ಮೊದಲ ದಿನ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಪ್ರಯಾಣ ಮಾಡಿದೆವು. ಹಾಸನದಿಂದ ಚಿಕ್ಕಮಗಳೂರಿಗೆ ತಲುಪುವುದೇ ಕಷ್ಟವಾಗಿದೆ. ರಸ್ತೆ ತುಂಬೆಲ್ಲಾ ಹೊಂಡಗಳೇ ಇವೆ. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಚಿಕ್ಕಮಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಸಮಸ್ಯೆಗಳ ಆಗರವಾಗಿದೆ. ಗ್ರಾಮೀಣ ಸಾರಿಗೆ ಬಸ್ಗಳು ನಿಲ್ಲುವ ಜಾಗದಲ್ಲಂತೂ ಪ್ರಯಾಣಿಕರಿಗೆ ಯಾವುದೇ ಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇದೆ. ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ವರದಿ ನೀಡಿದ ಬಳಿಕ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದರು.
‘ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಕಸದ ಗುಡ್ಡವೇ ಇರುವುದನ್ನು ನೋಡಿದ್ದೇನೆ. ಸಂಸ್ಕರಿಸಲು ಹಲವು ತಂತ್ರಜ್ಞಾನಗಳಿವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ವೈಜ್ಞಾನಿಕ ಕ್ರಮ ಕೈಗೊಳ್ಳುವ ಆಲೋಚನೆಯನ್ನು ಅಧಿಕಾರಿಗಳು ಮಾಡಿಯೇ ಇಲ್ಲ. ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನೂ ಸುತ್ತಮುತ್ತಲ ಜನ ತಿಳಿಸಿದರು. ಆದ್ದರಿಂದ ಈ ವಿಷಯದ ಸಂಬಂಧವೂ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.
ಕಸ ವಿಲೇವಾರಿ ಸಂಬಂಧ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಗರಸಭೆ ಆಯುಕ್ತರು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ತಿಳಿಸಲಾಗಿದೆ ಎಂದು ವಿವರಿಸಿದರು.
‘ಮೊದಲ ದಿನವೇ ಎರಡು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ್ದೆವು. ಅಲ್ಲಿಯೂ ಕೆಲವು ಲೋಪಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. ಸಮಸ್ಯೆ ಸರಿಪಡಿಸಿದ ಬಳಿಕ ಪ್ರಕರಣ ಇತ್ಯರ್ಥವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.