ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ): ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು, ಶನಿವಾರ ಇಲ್ಲಿಯ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಒಳಕೋಣೆಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
‘ಸಮಾಜದ ಒಳಿತು, ಸೌಹಾರ್ದ, ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಂಭಾಪುರಿ ಶ್ರೀ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ವೀರಶೈವ, ಲಿಂಗಾಯತ ಹಾಗೂ ಎಲ್ಲ ಉಪ ಪಂಗಡಗಳಿಗೂ ಒಳಿತಾಗಬೇಕು ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ’ ಎಂದು ನಂತರ ಎಂ.ಬಿ.ಪಾಟೀಲ ತಿಳಿಸಿದರು.
‘ಅಡ್ಡ ಪಲ್ಲಕ್ಕಿ ವಿಷಯದಲ್ಲಿ ನಾನು ಎಂದೂ ವಿರೋಧ ಮಾಡಿಲ್ಲ’ ಎಂದ ಅವರು, ‘ಸಿದ್ದರಾಮಯ್ಯ ಮತ್ತು ರಂಭಾಪುರಿ ಶ್ರೀ ನಡುವೆ ನಡೆದ ಖಾಸಗಿ ಮಾತಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದರು.
‘ರಾಜ್ಯದ ಎಲ್ಲ ಮಠ ಮಂದಿರ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ನನಗೆ ಹಾಗೂ ಪಕ್ಷಕ್ಕೆ ಆಶೀರ್ವಾದ ಪಡೆಯುತ್ತಿದ್ದೇನೆ’ ಎಂದರು.
ಬಿಜೆಪಿ ಸರ್ಕಾರ ಆಚರಿಸುತ್ತಿರುವುದು ‘ಜನೋತ್ಸವ’ ಅಲ್ಲ ‘ಜಲೋತ್ಸವ’ ಎಂದರು.
ಶಾಸಕ ಟಿ.ಡಿ.ರಾಜೇಗೌಡ, ಮುಖಂಡರಾದ ಗಾಯತ್ರಿ ಶಾಂತೇಗೌಡ, ಬಿ.ಎಲ್.ಶಂಕರ್, ಡಾ.ಅಂಶುಮಂತ್, ಡಾ.ವಿಜಯಕುಮಾರ್, ಶ್ರೀನಿವಾಸ್, ನಟರಾಜ್, ಜುಬೇದಾ, ಜಿ.ಬಿ.ಪವನ್, ಬಿ.ಕೆ.ಮಧುಸೂದನ್, ಮಹಮ್ಮದ್ ಹನೀಫ್ , ಇಬ್ರಾಹಿಂ ಶಾಫಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.