ADVERTISEMENT

ಪಟ್ಟಣ ಪಂಚಾಯಿತಿ ಮೌನಕ್ಕೆ ಆಕ್ರೋಶ

ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆ ಒಳ ಬಾಡಿಗೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:15 IST
Last Updated 10 ಡಿಸೆಂಬರ್ 2025, 4:15 IST
ಮೂಡಿಗೆರೆ ಪಟ್ಟಣದ ತತ್ಕೊಳ ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳು
ಮೂಡಿಗೆರೆ ಪಟ್ಟಣದ ತತ್ಕೊಳ ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳು   

ಮೂಡಿಗೆರೆ: ಪಟ್ಟಣ ಪಂಚಾಯಿತಿ ಸುಪರ್ದಿಯ ಅಂಗಡಿ ಮಳಿಗೆಗಳಲ್ಲಿ ಒಳ ಬಾಡಿಗೆ ವ್ಯವಸ್ಥೆ ಅವ್ಯಾಹತವಾಗಿದ್ದು, ಪಟ್ಟಣ ಪಂಚಾಯಿತಿ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತತ್ಕೊಳ ರಸ್ತೆ, ಕೆ.ಎಂ. ರಸ್ತೆ ಸೇರಿದಂತೆ ವಿವಿಧೆಡೆ ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳಿದ್ದು, ಎರಡು ದಶಕಗಳಿಗೂ ಹಿಂದೆ ಹರಾಜು ನಡೆಸಲಾಗಿದ್ದು, ನಂತರ ಬಹಿರಂಗ ಹರಾಜು ಮಾಡದ ಕಾರಣ, ಅಂಗಡಿ ಮಳಿಗೆಗಳು ಎರಡು ದಶಕಗಳ ಹಿಂದಿನ ಮಾಲೀಕರ‌ ಹೆಸರಿನಲ್ಲಿಯೇ ಬಾಡಿಗೆಯಿದ್ದು ಆ ಅಂಗಡಿಗಳಲ್ಲಿನ ವರ್ತಕರು ಮಾತ್ರ ಹತ್ತಾರು ಮಂದಿ ಬದಲಾಗಿದ್ದಾರೆ. ಬಹುತೇಕ ಮಳಿಗೆಗಳಿಂದ ಪಟ್ಟಣ ಪಂಚಾಯಿತಿಗೆ ಪಾವತಿ ಮಾಡುವ ಬಾಡಿಗೆಯು ಇಂದಿಗೂ ನಾಲ್ಕಂಕಿ‌ ದಾಟದಿದ್ದರೂ, ಅದರ ಮಾಲೀಕರು ಮಾತ್ರ ₹30 ರಿಂದ ₹40 ಸಾವಿರಕ್ಕೆ ಒಳ ಬಾಡಿಗೆಗೆ ನೀಡಿ, ಕುಳಿತಲ್ಲಿಯೇ ₹20 ರಿಂದ ₹30 ಸಾವಿರ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಒಳ ಬಾಡಿಗೆಯ ಹಿಂದೆ ಪಟ್ಟಣ ಪಂಚಾಯಿತಿಯ ಕೆಲವು ಅಧಿಕಾರಿಗಳ ಕೈವಾಡವೂ ಇರುವ ಬಗ್ಗೆ ಸಾರ್ವಜನಿಕರಿಂದ ಆರೋಪ ವ್ಯಕ್ತವಾಗಿದ್ದು, ಸ್ಥಳೀಯ ಸಂಸ್ಥೆಗಳ ಅಂಗಡಿ ಮಳಿಗೆಗಳು, ವಾಣಿಜ್ಯ ಸಂಕೀರ್ಣಗಳ ಹರಾಜಿಗೆ ಸ್ಪಷ್ಟ ನಿಯಮವಿದ್ದರೂ, ಅವುಗಳನ್ನು‌ ಗಾಳಿಗೆ ತೂರಿ ಒಳ ಬಾಡಿಗೆ‌ ನೀಡಲು ವ್ಯವಸ್ಥಿತವಾಗಿ ಕೆಲವು‌ ಮಾಲೀಕರಿಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ ಎಂದು ದೂರಿದ್ದಾರೆ.

ADVERTISEMENT

ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳಲ್ಲಿ ಹರಾಜು ಕೂಗಿದ ಬಾಡಿಗೆದಾರರಿಗಿಂತಲೂ, ಒಳ ಬಾಡಿಗೆ ಕೊಟ್ಟಿರುವವರೇ ಹೆಚ್ಚು. ಕೆಲವರು ಹರಾಜು ಕೂಗುವಾಗ ತಾವು ಪಡೆದ ವ್ಯಾಪಾರ ಪರವಾನಗಿಯೇ ಬೇರೆ, ಈಗಿರುವ ವ್ಯಾಪಾರವೇ ಬೇರೆಯಾಗಿದೆ. ಒಳ ಬಾಡಿಗೆ ಪಡೆದ ಕೆಲವು ವ್ಯಾಪಾರಿಗಳು ಯಾವುದೇ ಪರವಾನಗಿ ಪಡೆಯದೇ ವ್ಯಾಪಾರ ನಡೆಸುತ್ತಿದ್ದರೂ ಪಟ್ಟಣ ಪಂಚಾಯಿತಿ ಕಣ್ಮುಚ್ಚಿ ಕುಳಿತಿದೆ. ಹರಾಜು ಪಡೆದ‌ ಕೆಲವು ಮಾಲೀಕರು ಯಾವುದೇ ಮುಲಾಜಿಲ್ಲದೇ ತಮ್ಮ ಸ್ವಂತ‌ ಕಟ್ಟಡದಂತೆ ₹30 ಸಾವಿರಕ್ಕೂ ಅಧಿಕ ಮೊತ್ತಕ್ಕೆ ಒಳ ಬಾಡಿಗೆ ನೀಡುತ್ತಿದ್ದಾರೆ. ಅಂಗಡಿ ಮಳಿಗೆಗಳ ನಿಯಮಗಳನ್ನು ಗಾಳಿಗೆ ತೂರಿರುವ ಪಟ್ಟಣ ಪಂಚಾಯಿತಿ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧತೆಯಾಗಿದೆ. ಕೂಡಲೇ ಒಳ ಬಾಡಿಗೆ ನೀಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ಅಂಗಡಿ ಮಳಿಗೆಗಳನ್ನು ವಶಕ್ಕೆ ಪಡೆದು ಮರು ಹರಾಜು ನಡೆಸಬೇಕು ಎಂದು ಮೇಗಲಪೇಟೆ ಕೆ. ಲೋಕೇಶ್ ಒತ್ತಾಯಿಸಿದ್ದಾರೆ.

ಮಳಿಗೆಗಳನ್ನು ಹರಾಜು ಪಡೆದವರು ಒಳ ಬಾಡಿಗೆ ನೀಡಲು ಅವಕಾಶವಿಲ್ಲ. ಅಂತಹ ಪದ್ಧತಿ ಜಾರಿಗೊಂಡಿದ್ದರೆ ಕ್ರಮ‌ ಕೈಗೊಳ್ಳಲಾಗುವುದು. 10 ವರ್ಷಗಳ ಹಿಂದೆ ಮಳಿಗೆಗಳನ್ನು ಹರಾಜು‌ ಮಾಡಲಾಗಿದೆ. ಇದೀಗ ಹರಾಜು ನಡೆಸಲು ಕಡತ ತಯಾರಿ ಮಾಡಲು ಸೂಚಿಸಲಾಗಿದ್ದು, ಜಿಲ್ಲಾಧಿಕಾರಿ ಅನುಮೋದನೆ ಪಡೆದು ಹರಾಜು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸರಸ್ವತಿಷಣ್ಮುಗಂ ಸುಂದರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.