ADVERTISEMENT

ಮೂಡಿಗೆರೆ: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

ಕೊನೆಗೂ ಸಿಗದ ಬೈರನ ಸುಳಿವು– ಐದು ಸಾಕಾನೆಗಳು ವಾಪಸ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 4:59 IST
Last Updated 6 ನವೆಂಬರ್ 2022, 4:59 IST
ಸಾಕಾನೆಯನ್ನು ಲಾರಿಯಲ್ಲಿ ವಾಪಸ್‌ ಕರೆದೊಯ್ಯಲಾಯಿತು
ಸಾಕಾನೆಯನ್ನು ಲಾರಿಯಲ್ಲಿ ವಾಪಸ್‌ ಕರೆದೊಯ್ಯಲಾಯಿತು   

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಕಾಡಾನೆ ‘ಬೈರ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ.

ಅಭಿಮನ್ಯು, ಭೀಮಾ, ಗೋಪಾಲಸ್ವಾಮಿ, ಅಜ್ಜಯ್ಯ, ಮಹೇಂದ್ರ, ಪ್ರಶಾಂತ್ ಎಂಬ ಆರು ಸಾಕಾಣೆಗಳನ್ನು ಬೈರನ ಸೆರೆಗಾಗಿ ಐದು ದಿನಗಳ ಹಿಂದೆ ಬೈರಾಪುರ ಗ್ರಾಮಕ್ಕೆ ಕರೆತಂದು, ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಬೈರನ ಸುಳಿವು ಸಿಗದೇ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಕಾರ್ಯಾಚರಣೆಗಾಗಿ ತಂದಿದ್ದ ಅಭಿಮನ್ಯು ಆನೆಗೆ ಅನಾರೋಗ್ಯ ಉಂಟಾಗಿದೆ. ಮತ್ತೊಂದೆಡೆ ಅಜ್ಜಯ್ಯ ಹಾಗೂ ಗೋಪಾಲಸ್ವಾಮಿ ಆನೆಗಳಿಗೆ ಮದ ಬಂದಿದ್ದು, ಈ ಕಾರಣದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಬೈರ ಕಾಡಾನೆಯು ತಾಲ್ಲೂಕಿನಿಂದ ಬೇರೆ ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ತೆರಳಿರಬಹುದು ಎಂದು ಶಂಕಿಸಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಮಧ್ಯಾಹ್ನದ ಬಳಿಕ ಸಾಕಾನೆಗಳನ್ನು ಲಾರಿಗಳಲ್ಲಿ ವಾಪಸ್‌ ಕರೆದೊಯ್ಯಲಾಯಿತು.

ADVERTISEMENT

‘ಅಭಿಮನ್ಯು’ ಆನೆಗೆ ಅನಾರೋಗ್ಯವಾಗಿದೆ. ಉಳಿದ ಎರಡು ಆನೆಗಳಿಗೆ ಮದವೇರಿದೆ. ಕಾಡಾನೆ ‘ಬೈರ’ ಮೂಡಿಗೆರೆ ಭಾಗದಿಂದ ಸಕಲೇಶಪುರದ ಕಡೆಗೆ ಹೋಗಿದೆ. ಹೀಗಾಗಿ, ‘ಬೈರನ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಚಿಕ್ಕಮಗಳೂರು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌.ಇ ಕ್ರಾಂತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸ್ಥಳೀಯರಿಗೆ ಬೇಸರ: ಕಾಡಾನೆ ದಾಳಿಯಿಂದ ತಾಲ್ಲೂಕಿನಲ್ಲು ಹಲವರು ಸಾವಿಗೀಡಾದ ಬಳಿಕ ಸರ್ಕಾರವು ಬೈರ ಎಂಬ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಸ್ಥಳೀಯರಲ್ಲಿ ಕಾಡಾನೆ ದಾಳಿಗೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ಕಾರ್ಯಾಚರಣೆಯು ಯಶಸ್ವಿ ಯಾಗದಿರುವುದಕ್ಕೆ ಸ್ಥಳೀಯರು ಬೇಸರ
ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.