ಮೂಡಿಗೆರೆ: ತಾಲ್ಲೂಕಿನ ಜನರು ಕಾಡು ಪ್ರಾಣಿಗಳೊಂದಿಗೆ ವಾಸ ಮಾಡುವಂತಹ ಪರಿಸ್ಥಿತಿ ಬಂದೊದಗಿರುವುದು ಅಪಾಯದ ಬೆಳವಣಿಗೆ ಎಂದು ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಡಿ.ಎಲ್ ವಿಜಯಕುಮಾರ್ ಹೇಳಿದರು.
ಪಟ್ಟಣದ ಜೇಸಿಐ ಭವನದಲ್ಲಿ ಜೇಸಿಐ ಸಪ್ತಾಹದ ಅಂಗವಾಗಿ ಸೋಮವಾರ ನಡೆದ ಕೃಷಿ ಹಾಗೂ ಕಾಡುಪ್ರಾಣಿಗಳ ಉಪಟಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ರೈತರು ಸಂಕಷ್ಟ ಎದುರಿಸುತ್ತಿರುವುದು ಸರ್ಕಾರಕ್ಕೆ ಗೊತ್ತಿರದ ವಿಚಾರವೇನಲ್ಲ. ಕಾಡು ಪ್ರಾಣಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದ್ಧತೆ ಸರ್ಕಾರಕ್ಕೆ ಇಲ್ಲ. ಸರ್ಕಾರದ ಆದೇಶ ಮೀರಿ ಅರಣ್ಯ ಇಲಾಖೆ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ’ ಎಂದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ‘ವರ್ಷಗಟ್ಟಲೆ ಕಷ್ಟಪಟ್ಟು ಗಿಡಗಳನ್ನು ಉಳಿಸಿಕೊಂಡು ಬಂದು, ಅವುಗಳು ಫಸಲು ಬಿಡುವ ಹೊತ್ತಿಗೆ ಕಾಡಾನೆ ದಾಳಿಗೆ ಗಿಡಗಳೆಲ್ಲವೂ ನಾಶವಾಗುತ್ತಿರುವುದರಿಂದ ಕೃಷಿ ಭೂಮಿ ಪಾಳು ಬಿಡುವಂತಾಗಿದೆ. ಕೃಷಿಯಲ್ಲೇ ಜೀವನ ನಡೆಸುವ ಸಣ್ಣ ಬೆಳೆಗಾರರು ಇಂತಹ ಸಂಕಷ್ಟಕ್ಕೆ ಸಿಲುಕಿಕೊಂಡು ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ‘ಮೂಡಿಗೆರೆ ಭೈರ’ ಎಂಬ ಕಾಡಾನೆಯೊಂದನ್ನು ಹಿಡಿದರೆ ಸಾಲದು. ಎಲ್ಲಾ ಕಾಡಾನೆಗಳನ್ನು ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ಜೇಸಿಐ ಅಧ್ಯಕ್ಷೆ ವಿದ್ಯಾರಾಜು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಕ (ಎಸಿಎಫ್) ರಾಜೇಶ್ ನಾಯಕ್, ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ ದಿವಾಕರ್, ಸಾರಗೋಡು ಜಂಗಲ್ ಹೋಂ ಸ್ಟೇ ಮಾಲೀಕ ನಾರಾಯಣ ಗೌಡ ಬೀಡಿಕೆ, ಜೇಸಿಐ ಕಾರ್ಯದರ್ಶಿ ಸುಪ್ರಿತ್, ಮಹಿಳಾ ಅಧ್ಯಕ್ಷೆ ಕೃತಿ ಪ್ರದೀಪ್, ಸಂಧ್ಯಾ ಪ್ರದೀಪ್, ರಮ್ಯಾ ಸಂದೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.