ಮೂಡಿಗೆರೆ: ಇದೇ 18ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಸಮಿತಿ ವತಿಯಿಂದ ನಡೆಯಲಿರುವ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ವಧು–ವರರಿಗೆ ಕಾಂಗ್ರೆಸ್ ನಾಯಕಿ ಮೋಟಮ್ಮ ಶನಿವಾರ ವಸ್ತ್ರಗಳನ್ನು ವಿತರಿಸಿದರು.
ಪಟ್ಟಣದ ಸುಶಾಂತ್ ನಗರದಲ್ಲಿರುವ ಶಾಸಕಿ ನಯನಾಮೋಟಮ್ಮ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹತ್ತು ಜೋಡಿ ವಧುವರರಿಗೆ ಬಟ್ಟೆ, ಮದುವೆ ಪರಿಕರ ವಿತರಿಸಲಾಯಿತು. ವಧುವಿಗೆ ಬಳೆ ತೊಡಿಸಿ, ಅರಿಶಿಣ, ಕುಂಕುಮ ನೀಡಿ, ಶಾಸ್ತ್ರೋಕ್ತವಾಗಿ ವಸ್ತ್ರ ವಿತರಿಸಲಾಯಿತು.
ಮೋಟಮ್ಮ ಮಾತನಾಡಿ, ‘ಮದುವೆಗಳು ವಧು, ವರರ ಕುಟುಂಬಗಳಿಗೂ ಸಾಲದ ಶೂಲವಾಗಬಾರದು ಎಂಬ ಕಾರಣಕ್ಕೆ 1994ರಿಂದಲೂ ಪಟ್ಟಣದಲ್ಲಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಕೆಲವು ವರ್ಷ ಕಾರಣಾಂತರಗಳಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ’ ಎಂದರು.
‘ಗ್ರಾಮೀಣ ಭಾಗಕ್ಕೆ ಭೇಟಿ ನೀಡದಾಗ ಹಲವು ಮಹಿಳೆಯರು ಈ ಬಗ್ಗೆ ಕೇಳುತ್ತಿದ್ದರು. ಈ ಬಾರಿ 5 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ, ವಿವಾಹ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 10 ಜೋಡಿಗೆ ಅವಕಾಶ ಕಲ್ಪಿಸಲಾಗಿದೆ. ಮಲೆನಾಡಿದ ಸಂಪ್ರದಾಯದಂತೆ ದಲಿತ ಪುರೋಹಿತರೇ ವಿವಾಹ ನಡೆಸಿಕೊಡಲಿದ್ದು, ಎಲ್ಲ ವಧು–ವರರಿಗೆ ಬಟ್ಟೆ, ವಧುವಿಗೆ ಚಿನ್ನದ ಮಾಂಗಲ್ಯ ಸೇರಿದಂತೆ ಹಲವು ಪರಿಕರಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಮನೆಯಲ್ಲಿ ಅದ್ಧೂರಿ ಊಟದ ವ್ಯವಸ್ಥೆ, ಇತರ ವೆಚ್ಚಗಳನ್ನು ಮಾಡದೆ, ಆದರ್ಶ ಜೀವನ ನಡೆಸಬೇಕು’ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್, ಸದಸ್ಯೆ ಜಯಮ್ಮ, ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಬೆಟ್ಟಗೆರೆ ಶಂಕರ್, ಸುಧೀರ್ ಹಾಲೂರು, ಸುಬ್ರಹ್ಮಣ್ಯ ಚಕ್ರಮಣಿ, ಕೋಮರಾಜ್, ವಧು–ವರರ ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.