ADVERTISEMENT

ಮೂಡಿಗೆರೆ | ಕೆಡಿಪಿ ಸಭೆ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 4:58 IST
Last Updated 9 ಜನವರಿ 2026, 4:58 IST
ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ‌ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು
ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ‌ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು   

ಮೂಡಿಗೆರೆ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆ, ಕಾಮಗಾರಿಗಳು, ಶಾಲೆ ಕಟ್ಟಡ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ವಿವಿಧ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಅನುಪಾಲನ ವರದಿ ಮಂಡಿಸುವ ಮೂಲಕ ಕೆಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಬಳಿಕ ಶಾಸಕಿ ನಯನಾ ಮೋಟಮ್ಮ ಮಾತನಾಡಿ, 'ಪಟ್ಟಣದ ರಸ್ತೆ ನೋಡಲಾಗುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಬಿಗುಡಾಯಿಸುತ್ತಲೇ ಇದೆ. ಕಳೆದ ಮೂರು ವರ್ಷಗಳದ ರಾಷ್ಟ್ರೀಯ ಹೆದ್ದಾರಿ 173 ಹಾಗೂ 73ರ ವಿಸ್ತರಣೆ ಬಗ್ಗೆ ಜನರಿಗೆ ಉತ್ತರಿಸಲು ಆಗುತ್ತಿಲ್ಲ. ನಾವು ಕೊಡಬೇಕಾದ ಸಹಕಾರ ಎಲ್ಲವೂ ನೀಡುತ್ತಿದ್ದರೂ ರಸ್ತೆ ವಿಸ್ತರಣೆ ತಡವಾಗುತ್ತಿದೆ. ಎಲ್ಲಾ ತೊಡಕುಗಳನ್ನು ಬಗೆಹರಿಸಿ ಶೀಘ್ರದಲ್ಲೇ ರಸ್ತೆ ವಿಸ್ತರಣೆಗೆ ಕ್ರಮ ವಹಿಸಬೇಕು’ ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಚಿಂತಾಮಣಿ ಕಾಂಬ್ಳೆಗೆ ಸೂಚಿಸಿದರು.

ADVERTISEMENT

‘ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಾರಿ ನೀರಿನ ಸಮಸ್ಯೆ ಯಾವ ಗ್ರಾಮದಲ್ಲೂ ಬಾರದಂತೆ ನಿಗಾ ವಹಿಸಬೇಕು. ಲೋಕೋಪಯೋಗಿ ಇಲಾಖೆ ರಸ್ತೆಗೆ ₹30 ಕೋಟಿ ಟೆಂಡರ್ ಆಗಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು.₹19.5 ಕೋಟಿ ಬಾಕಿ ಇರುವ ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ತ್ವರಿತವಾಗಿ ಕೆಲಸ ಪ್ರಾರಂಭಿಸಬೇಕು. ಎಲ್ಲಾ ಇಲಾಖೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಕ್ತಾಯಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಕಳಸದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಕಿ ಇರುವ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಜಾಗ ಮೀಸಲಿರಿಸಲು ಕ್ರಮ ವಹಿಸಲಾಗುವುದು. ಶಾಲೆ ದುರಸ್ತಿಗೆ ಅನುದಾನ ಬಂದಿದೆ. ಬೇಸಿಗೆ ರಜೆ ಅಂತ್ಯದೊಳಗೆ ಮಳೆಗಾಲದಲ್ಲಿ ಯಾವುದಾದರೂ ಕುಸಿಯುವ ಹಂತದಲ್ಲಿರುವ ಶಾಲೆಗಳಿದ್ದರೆ ಮಾಹಿತಿ ನೀಡಬೇಕು. ಮಳೆ ಪ್ರಾರಂಭಗೊಳ್ಳುವ ಮುನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ದುರಸ್ತಿ ಕಾರ್ಯವನ್ನು ಬೇಸಿಗೆ ರಜೆಯಲ್ಲಿ ಪೂರ್ಣ ಗೊಳಿಸಬೇಕು' ಎಂದು ಬಿಇಒ ಮೀನಾಕ್ಷಿ ಅವರಿಗೆ ಸೂಚಿಸಿದರು.

ಇದೇ ವೇಳೆ ಕಾರ್ಮಿಕ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಕಾರ್ಮಿಕರ ಕಿಟ್ ವಿತರಿಸಲಾಯಿತು.
ಮೂಡಿಗೆರೆ ಇಒ ದಯಾವತಿ, ಕಳಸ ಇಒ ಸುದೀಪ್, ತಹಶೀಲ್ದಾರ್‌ರಾದ ಎಸ್.ಅಶ್ವಿನಿ, ಶಾರದಾ, ಆಡಳಿತಾಧಿಕಾರಿ ಮಹೇಶ್, ಆನಂದ್, ಕೆಡಿಪಿ ಸದಸ್ಯರಾದ ರವಿ ಕುನ್ನಳ್ಳಿ, ಸುರೇಂದ್ರ ಉಗ್ಗೆಹಳ್ಳಿ, ಸಂಪತ್ ಬಿಳಗುಳ, ರಫೀಕ್ ಕಳಸ, ಅಶ್ವತ್ ಮಾಕೋನಹಳ್ಳಿ, ಪ್ರವೀಣ್, ಅಬ್ದುಲ್ ಶುಕೂರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಮಿಕರಿಗೆ ಸಲಕರಣೆಗಳ ಕೊಟ್ ನ್ನು ಶಾಸಕಿ ನಯನಾಮೋಟಮ್ಮ ವಿತರಿಸಿದರು

'ಎನ್.ಆರ್. ಪುರದಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ನೀಗಿಸುವ ಬಗ್ಗೆ ಗಮನ ಹರಿಸಲಾಗುವುದು
ನಯನಾ ಮೋಟಮ್ಮ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.