ಚಿಕ್ಕಮಗಳೂರು: ಹಣದ ಆಸೆಗೆ ತಾಯಿಯನ್ನೇ ಕೊಲೆ ಮಾಡಿದ ಗಣೇಶ (40) ಎಂಬಾತಗೆ ನಗರದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ನಾಲ್ಕು ವರ್ಷ ಕಠಿಣ ಸಜೆ, ₹ 5,000 ದಂಡ ವಿಧಿಸಿದೆ.
ನ್ಯಾಯಾಧೀಶರಾದ ಉಮೇಶ್ ಎಂ.ಅಡಿಗ ಅವರು ಈ ಆದೇಶ ನೀಡಿದ್ದಾರೆ. ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ ಮೂರು ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?: 2019 ಜನವರಿ 16ರಂದು ರಾತ್ರಿ 9.30ರ ಹೊತ್ತಿನಲ್ಲಿ ಬಣಕಲ್ನ ಹೊರಟ್ಟಿ ಕಾಲೊನಿಯಲ್ಲಿ ಕೊಲೆ ಪ್ರಕರಣ ನಡೆದಿತ್ತು.
ವೃದ್ಧಾಪ್ಯ ವೇತನ (₹ 600) ಕಸಿದುಕೊಳ್ಳಲು ಗಣೇಶ ತಾಯಿ ಮೀನಾಕ್ಷಮ್ಮ ಅವರೊಂದಿಗೆ ಜಗಳವಾಡಿದ್ದ. ಹಣ ಕೊಡಲಿಲ್ಲ ಎಂದು ಊರುಗೋಲು–ದೊಣ್ಣೆಯಿಂದ ತಲೆ, ಕೈ, ಕಾಲಿಗೆ ಹೊಡೆದು ಕೊಲೆ ಮಾಡಿದ್ದ.
ಶವವನ್ನು ಚನ್ನಕೇಶವ ಎಂಬವರ ಮನೆ ಮುಂಭಾಗದ ರಸ್ತೆ ಬದಿಯಲ್ಲಿ ಹಾಕಿದ್ದ. ಬಣಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯುಟರ್ ವಿ.ಜಿ.ಯಳಗೇರಿ, ಭಾವನಾ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.