
ಶೃಂಗೇರಿ: ‘ಸ್ವಾರ್ಥ ಸಾಧನೆಗಾಗಿ ಜೀವಿಸದೆ ದೇಶಕ್ಕಾಗಿ ಬದುಕಬೇಕು. ಭಾರತದ ಭವ್ಯ ಭವಿಷ್ಯ ರೂಪಿಸುವ ಜವಾಬ್ದಾರಿ ಯುವಜನರ ಮೇಲಿದೆ. ಎಂದು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್ ಜೀತು ಹೇಳಿದರು.
ಶೃಂಗೇರಿ ಜೆಸಿಬಿಎಂ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ, ನೈತಿಕ ಮತ್ತು ಆಧ್ಯಾತ್ಮಿಕ ವೇದಿಕೆ ಹಾಗೂ ವಾರ್ತಾ ಇಲಾಖೆ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ದೇಶವು ಹಲವು ಬಾರಿ ಪರಕೀಯರ ದಾಳಿಗೆ ಒಳಗಾಗಿ ಗುಲಾಮಗಿರಿಯಲ್ಲಿ ನೂರಾರು ವರ್ಷ ಕಳೆಯಿತು. ಸಿರಿ ಸಂಪತ್ತಿನ ಲೂಟಿ ಆಯಿತು. ವಿದ್ಯಾರ್ಥಿಗಳು ಅನುತ್ತೀರ್ಣರಾದರೂ ಮರು ಪ್ರಯತ್ನದಲ್ಲಿ ಯಶಸ್ವಿಯಾಗಬಹುದು. ಆದರೆ ಸಂಸ್ಕಾರದಲ್ಲಿ ಕೊರತೆಯಾದರೆ ಜೀವನ ವ್ಯರ್ಥ ಎಂದು ಅವರು ಹೇಳಿದರು.
ಆದಿ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ಶಿವಕುಮಾರ ಸ್ವಾಮಿಗಳು ಅವರಂಥ ಮಹನೀಯರ ಜೀವನ ಯುವಜನರಿಗೆ ಪ್ರೇರಕ. ಸಂಪತ್ತಿನ ಒಂದಂಶ ದೇಶದ ಪ್ರಗತಿಗೆ ಮೀಸಲಿಡಬೇಕು' ಎಂದರು.
ವಕೀಲ ಎಚ್.ಆರ್ ಉಮೇಶ್ ಹೆಗ್ಡೆ ನಾಗರಿಕರ ಹಕ್ಕು ಮತ್ತು ಕರ್ತವ್ಯದ ಕುರಿತು ಉಪನ್ಯಾಸ ನೀಡಿದರು. ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಹರಿಣಾಕ್ಷಿ, ಉಪ ಪ್ರಾಂಶುಪಾಲ ಎ.ಜಿ ಪ್ರಶಾಂತ್, ಎನ್ಎಸ್ಎಸ್ ಘಟಕದ ಸಂತೋಷ್, ವಕೀಲರಾದ ವಿ.ಆರ್ ನಟಶೇಖರ್, ರಾಜೇಶ್ವರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.