ಬಿ.ಎಚ್.ಕೈಮರ (ನರಸಿಂಹರಾಜಪುರ): ಮಲೆಯಾಳಿ ಭಾಷೆ ಮಾತನಾಡುವ ರಾಜ್ಯದಲ್ಲಿ ಹೆಚ್ಚಾಗಿ ಓಣಂ ಹಬ್ಬ ಆಚರಿಸುತ್ತಾರೆ. ಆದರೆ, ಓಣಂ ಹಬ್ಬವು ಮಲೆಯಾಳಿಗಳ ಹಬ್ಬವಾಗಿರದೆ ಎಲ್ಲಾ ಹಿಂದೂಗಳ ಹಬ್ಬವಾಗಿದೆ ಎಂದು ಕೇರಳ ರಾಜ್ಯದ ಮಣ್ಣಾರ್ ಕಾಡ್ನ ಪ್ರವಚನಕಾರ ಪಿ.ಎಂ.ವ್ಯಾಸನ್ ಹೇಳಿದರು.
ತಾಲ್ಲೂಕಿನ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ಭಾನುವಾರ ಕೇರಳ ಹಿಂದೂ ಸಮಾಜದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ 4ನೇ ವರ್ಷದ ಓಣಂ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅದ್ವೈತ ಸಿದ್ದಾಂತವನ್ನು ಲೋಕಕ್ಕೆ ಪರಿಚಯಿಸಿದ ಶಂಕರಾಚಾರ್ಯರ ಮಣ್ಣಲ್ಲಿ ನಿಂತು ಪ್ರವಚನ ಮಾಡಲು ನನಗ ಹೆಮ್ಮೆ ಎನಿಸಿದೆ. ಈಶ್ವರ, ಬ್ರಹ್ಮ,ವಿಷ್ಣು, ಮಹಾದೇವ, ದೇವಿ ಸೇರಿದಂತೆ ಎಲ್ಲಾ ದೇವರು ಒಂದೇ ಆಗಿದ್ದು ವಿವಿಧ ರೂಪಗಳಲ್ಲಿದೆ. ಎಲ್ಲಾ ದೇವರ ಚೈತನ್ಯವೂ ಒಂದೇ ಆಗಿದೆ. ಎಲ್ಲರಲ್ಲೂ ಇರುವುದು ಸನಾತನ ಧರ್ಮವಾಗಿದೆ. ಹಿಂದೂಗಳ ಸಂಘಟನೆಯ ಅಗತ್ಯವಿದೆ. ಸಂಘಟನೆಯಿಂದ ಶಕ್ತಿಯಂತರಾಗಬಹುದು. ವಿದ್ಯೆಯಿಂದ ಪ್ರಬುದ್ಧರಾಗಬಹುದು ಎಂದರು.
ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳ ಹಿಂದೂ ಸಮಾಜವು ಜಿಲ್ಲೆಯಲ್ಲಿ ಸಂಘಟನೆಯಾಗುತ್ತಿದೆ. ಕೇರಳ ಹಿಂದೂ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಾಯಕತ್ವ ಬೆಳೆಯಬೇಕು. ಮುಂದಿನ ಪೀಳಿಗೆಗೆ ನಾವು ಉತ್ತಮ ಸಮಾಜವನ್ನು ಹಸ್ತಾಂತರಿಸಬೇಕು. ಸಮಾಜದ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಪ್ರೀತಿಯಿಂದ, ಗೌರವದಿಂದ ಕಾಣಬೇಕು ಎಂದರು.
ಕೇರಳ ಹಿಂದೂ ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ, ಸರ್ಕಾರದ ಪ್ರತಿನಿಧಿಗಳು ಜನಗಣತಿಗಾಗಿ ಮನೆ ಬಂದಾಗ ಕೇರಳ ಹಿಂದೂ ಸಮಾಜದವರು ಎಚ್ಚರಿಕೆಯಿಂದ ಬರೆಯಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗುವುದಿಲ್ಲ ಎಂದರು.
ಕೇರಳ ಹಿಂದೂ ಸಮಾಜದ ಮುಖಂಡ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿದರು. ಕೇರಳ ಹಿಂದೂ ಸಮಾಜದ ಕಾರ್ಯದರ್ಶಿ ಕೆ.ಎನ್.ಅಶೋಕ್ ವರದಿ ವಾಚಿಸಿದರು.
ಕೇರಳ ಹಿಂದೂ ಸಮಾಜದ ಮುಖಂಡರಾದ ಶೀಗುವಾನಿ ಕೆ.ಎನ್.ಶಿವದಾಸ್, ಗಾಂದಿಗ್ರಾಮ ನಾಗರಾಜ, ಬಿ.ಎಚ್.ಕೈಮರ ಬಿನು, ಕೆರೆಮನೆ ಜನಾರ್ದನ್, ಚಿಟ್ಟಿಕೊಡುಗೆ ಮನೋಹರ್, ಕಿಚ್ಚಬ್ಬಿ ತಂಗಪ್ಪನ್, ಸಂಚಾಲಕ ಪಿ.ಆರ್.ಅರವಿಂದ್, ಮುಖಂಡ ಸ್ವಾಮಿನಾಥನ್ ವಿಶ್ರೇಯ, ಸುಧಾಕರ ಆಚಾರ್, ಸೌಖ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.