ಎಚ್.ಯು. ಫಾರುಕ್
ತರೀಕೆರೆ: ‘ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಕುರಿತು ಎದ್ದಿರುವ ವದಂತಿ ಸತ್ಯಕ್ಕೆ ದೂರವಾಗಿದ್ದು, ಇಸ್ಲಾಂ ಜಿಂದಾಬಾದ್ ಎಂದು ಕೂಗಿದ್ದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು. ಫಾರುಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಕೋಡಿಕ್ಯಾಂಪ್ ಸರ್ಕಲ್ನಲ್ಲಿ ಈದ್ ಮಿಲಾದ್ ಸಿದ್ಧತೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಕುರಿತು ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅಲ್ಲದೆ, ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ತರೀಕೆರೆಯಲ್ಲಿ ಹಿಂದಿನಿಂದಲೂ ಹಿಂದು-ಮುಸ್ಲಿಂ ಸಮುದಾಯದವರು ಭಾವೈಕ್ಯದಿಂದ ಜೀವಿಸುತ್ತಿದ್ದೇವೆ. ಈದ್ ಮಿಲಾದ್ಗೆ ಕೊಡಿಕ್ಯಾಂಪ್ ವೃತ್ತದಲ್ಲಿ ಶುಭಾಶಯವಿದ್ದ ಕಟೌಟ್ ಅಳವಡಿಸಿ, ನಂತರ ಇಸ್ಲಾಂ ಜಿಂದಾಬಾದ್ ಎಂದು ಕೆಲ ಯುವಕರು ಘೋಷಣೆ ಕೂಗಿದ್ದಾರೆ. ಈ ಕುರಿತು ವಿಡಿಯೊ ಲಭ್ಯವಾಗಿದ್ದು, ಅದನ್ನು ತರೀಕೆರೆ ಪೊಲೀಸರು ತನಿಖೆಗೊಳಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿದ್ದಾರೆ. ಎಫ್ಎಸ್ಎಲ್ ವರದಿ ಬರುವುದಕ್ಕೂ ಮುನ್ನವೇ ನಿರ್ಣಯಕ್ಕೆ ಬರುವುದು ಸರಿಯಲ್ಲ. ಒಂದು ವೇಳೆ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸಾಬೀತಾದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದ್ದಾರೆ.
ತರೀಕೆರೆಯಲ್ಲಿ ಈದ್ ಮಿಲಾದ್ ಅನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಹಿಂದು ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಮರಸ್ಯದಿಂದ ನಡೆದು ಕೊಳ್ಳಲಾಗಿದೆ. ಮುಹಮ್ಮದ್ ಪೈಗಂಬರ ಮತ್ತು ಭಾರತ ಸಂವಿಧಾನ ದೇಶ ಪ್ರೀತಿಸುವುದನ್ನು ಕಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.