ADVERTISEMENT

ರಾಷ್ಟ್ರೀಯ ಹೆದ್ದಾರಿ ಅಗೆದ ಪ.ಪಂ

ರಸ್ತೆಗೆ ಡಾಂಬರು ಹಾಕಿ ಕೊಡದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 2:32 IST
Last Updated 3 ಜನವರಿ 2021, 2:32 IST
ಕೊಪ್ಪ ತಾಲ್ಲೂಕಿನ ಸಿಗದಾಳು ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಪೈಪ್‌ಲೈನ್ ದುರಸ್ತಿಗಾಗಿ ರಸ್ತೆ ಅಗೆದ ಸ್ಥಳದಲ್ಲಿ ಜನರು ಪ್ರತಿಭಟಿಸಿದರು.
ಕೊಪ್ಪ ತಾಲ್ಲೂಕಿನ ಸಿಗದಾಳು ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಪೈಪ್‌ಲೈನ್ ದುರಸ್ತಿಗಾಗಿ ರಸ್ತೆ ಅಗೆದ ಸ್ಥಳದಲ್ಲಿ ಜನರು ಪ್ರತಿಭಟಿಸಿದರು.   

ಕೊಪ್ಪ: ಪಟ್ಟಣಕ್ಕೆ ನೀರು ಸರಬರಾಜಾಗುವ ಪೈಪ್‌ಲೈನ್ ಅನ್ನು ದುರಸ್ತಿಪಡಿಸುವ ನೆಪದಲ್ಲಿ ಪಟ್ಟಣ ಪಂಚಾಯಿತಿಯು ಸಿಗದಾಳಿನ ಬಳಿ ಪದೇಪದೇ ರಾಷ್ಟ್ರೀಯ ಹೆದ್ದಾರಿ 169 ಅನ್ನು ಅಗೆದು ರಸ್ತೆ ಹಾಳು ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರ ಜೆಸಿಬಿ ಯಂತ್ರ ಬಳಸಿ ಪೈಪ್‌ಲೈನ್ ದುರಸ್ತಿಪಡಿಸುವ ಕೆಲಸಕ್ಕೆ ಕೈ ಹಾಕಿದ ಪಟ್ಟಣ ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಗೆದರೆ ಹೆದ್ದಾರಿ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಹರಿಹರಪುರದ ತುಂಗಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುವ ಪೈಪ್‌ಲೈನ್ ಸಿಗದಾಳಿನ ಬಳಿ ರಾಷ್ಟ್ರೀಯ ಹೆದ್ದಾರಿ ಒಳ ಭಾಗದಲ್ಲಿ ಸೇರಿದೆ. ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯು ಮುನ್ನೆಚ್ಚರಿಕೆ ಕ್ರಮ ವಹಿಸಿ, ಪೈಪ್‌ಲೈನ್ ಸ್ಥಳಾಂತರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

‘ದುರಸ್ತಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಪಟ್ಟಣ ಪಂಚಾಯಿತಿ ಅನುಮತಿ ಪಡೆದಿಲ್ಲ’ ಎಂದು ಸ್ಥಳೀಯರು ಆಕ್ಷೇಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಡಲು ಮುಂದಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಸ್ಥಳೀಯರಾದ ರಂಜಿತ್ ಶೆಟ್ಟಿ, ಸಿಗದಾಳು ಜಯೇಂದ್ರ, ಹರಿಹರಪುರ ಪೊಲೀಸ್ ಸಿಬ್ಬಂದಿ ಮೊದಲಾದವರು ಪಾಲ್ಗೊಂಡಿದ್ದರು.

ಪಟ್ಟಣ ಪಂಚಾಯಿತಿ​ಹೊಣೆ
‘ಆಗಾಗ ರಸ್ತೆ ಅಗೆಯುವ ಮೂಲಕ ಪಟ್ಟಣ ಪಂಚಾಯಿತಿಯವರು ರಸ್ತೆ ಹಾಳು ಮಾಡುತ್ತಿದ್ದಾರೆ. ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಇದಕ್ಕೆ ಪಟ್ಟಣ ಪಂಚಾಯಿತಿ ನೇರ ಹೊಣೆ’ ಎಂದು ಗ್ರಾಮಾಂತರ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಚಂದ್ರ ಶೆಟ್ಟಿ ಎಚ್ಚರಿಸಿದರು.

‘ದುರಸ್ತಿ ನಂತರ ರಸ್ತೆಗೆ ಡಾಂಬರು ಹಾಕಿಕೊಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಟಿ.ಶಿಗ್ಗಾವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.