
ಕಡೂರು: ಬರದ ಬೇಗೆಯಿಂದ ಕಡೂರು ನಲುಗಿದ್ದು, ಕೆರೆಗಳೆಲ್ಲ ಬರಿದಾಗಿವೆ. ಕೊಳವೆ ಭಾವಿಗಳಲ್ಲೂ ನೀರು ಭಾಗಶಃ ಕಡಿಮೆಯಾಗಿದ್ದು, ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಬಿ.ಮಲ್ಲೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಕೇವಲ ಮೂರು ಅಡಿ ಗುಂಡಿಯಲ್ಲಿ ಸಮೃದ್ಧ ನೀರು ತುಂಬಿದೆ.
ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ಯೋಗೀಶ್ ಅವರ ತೋಟ ಎತ್ತರದ ಸ್ಥಳದಲ್ಲಿದೆ. ಒಂದೂವರೆ ವರ್ಷದ ಹಿಂದೆ ಈ ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದು, ಆ ಸಮಯದಲ್ಲಿ ಸುಮಾರು 8 ಅಡಿ ಅಗಲ ಮತ್ತು 3 ಅಡಿ ಆಳದ ಒಂದು ಗುಂಡಿ ತೆಗೆಯಲಾಗಿತ್ತು. ಆಗ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಆ ಗುಂಡಿಯಲ್ಲಿ ನೀರು ತುಂಬಿ ಅದೇ ನೀರು ಗಿಡಗಳಿಗೆ ಆಸರೆಯಾಗಿತ್ತು.
ಈಗಿನ ಬರಗಾಲದ ಸ್ಥಿತಿಯಲ್ಲೂ ಅದೇ ಗುಂಡಿಯಲ್ಲಿ ಸದಾ ನೀರು ತುಂಬಿರುತ್ತದೆ. ಯೋಗೀಶ್ ಮತ್ತು ಅವರ ತಾಯಿ ಪ್ರತಿದಿನ ಕೊಡದಲ್ಲಿ ನೀರು ತುಂಬಿ ಪ್ರತಿ ಗಿಡಕ್ಕೆ ನೀರು ಹಾಕುತ್ತಾರೆ. ತೆಗೆದಷ್ಟೂ ನೀರು ಗುಂಡಿಯಲ್ಲಿ ಮತ್ತೆ ತುಂಬಿಕೊಳ್ಳುತ್ತಿದೆ. ಮತ್ತೊಂದು ಅಚ್ಚರಿಯೆಂದರೆ ತುಂಬುವ ನೀರು ಗುಂಡಿಯಿಂದ ಹೊರ ಹರಿಯುವುದಿಲ್ಲ. ಈ ಗುಂಡಿಯಲ್ಲಿ ನೀರು ಇರುವುದನ್ನು ಕಂಡ ಹಲವರು ತಮ್ಮ ತೋಟಗಳಲ್ಲಿ ಗುಂಡಿ ತೆಗೆಸಿದರೂ ಅಲ್ಲಿ ನೀರು ದೊರೆತಿಲ್ಲ.
ಕಡೂರು ತಾಲ್ಲೂಕು ನಿರಂತರ ಬರಗಾಲಕ್ಕೆ ತುತ್ತಾಗುವ ಪ್ರದೇಶವೆಂಬ ಹಣೆ ಪಟ್ಟಿ ಹೊತ್ತಿದೆ. ಅಂತರ್ಜಲ ಮಟ್ಟವೂ ಪಾತಾಳ ತಲುಪಿದೆ. ಇಂಥ ಸಮಯದಲ್ಲಿ ಎತ್ತರದ ಸ್ಥಳದಲ್ಲಿರುವ ಜಮೀನಿನಲ್ಲಿ ಕೇವಲ ಮೂರು ಅಡಿ ಆಳದ ಗುಂಡಿಗೆ ನೀರು ಬರುವುದು ಹೇಗೆ ಎಂಬ ಅಚ್ಚರಿ ಗ್ರಾಮಸ್ಥರದ್ದಾಗಿದೆ.
ಬರಗಾಲದಲ್ಲಿ ತೆಂಗಿನ ಗಿಡಗಳನ್ನು ಉಳಿಸುವುದು ಹೇಗೆ ಎಂಬ ಚಿಂತೆ ಉಂಟಾಗಿತ್ತು. ಪವಾಡ ಎಂಬಂತೆ ಸಮೃದ್ಧ ನೀರು ದೊರೆಯುತ್ತಿದೆ.-ಎಂ.ಎಸ್.ಯೋಗೀಶ್, ಬಿ.ಮಲ್ಲೇನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.