ಮಾಕೋನಹಳ್ಳಿ ಗ್ರಾಮದಲ್ಲಿರುವ ಗ್ರಾಮ ಎನ್ ಕೇಂದ್ರ
ಚಿಕ್ಕಮಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ(ವಿಮಾ) ಯೋಜನೆಯಡಿ ನೋಂದಣಿ ಮಾಡಿಸಿದ್ದ ರೈತರ ಹಣವನ್ನು ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯ ಪಾಲಾಗಿರುವುದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿರುವ ರೈತರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮೂಡಿಗೆರೆ ತಾಲ್ಲೂಕಿನ ನಂದೀಪುರ ಮತ್ತು ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಇರುವ ಗ್ರಾಮ ಒನ್ ಕೇಂದ್ರದಲ್ಲಿ ರೈತರು ಅಡಿಕೆ, ಮೆಣಸು ಸೇರಿ ವಿವಿಧ ಬೆಳೆಗಳಿಗೆ 2024–25ನೇ ಸಾಲಿನ ಬೆಳೆ ವಿಮೆಗೆ 2024ರ ಜುಲೈನಲ್ಲಿ ಹಣ ಪಾವತಿಸಿ ನೋಂದಣಿ ಮಾಡಿಸಿದ್ದರು. ಒಂದೆರಡು ತಿಂಗಳಲ್ಲಿ ವಿಮೆ ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಕಾದಿದ್ದರು.
ಈ ವರ್ಷ ಮತ್ತೆ ಬೆಳೆ ವಿಮೆ ನೋಂದಣಿಗೆ ಅದೇ ಗ್ರಾಮ ಒನ್ ಕೇಂದ್ರಕ್ಕೆ ರೈತರು ಹೋಗಿದ್ದು, ಈ ವೇಳೆ ನೀಡಿದ್ದ ಸ್ವೀಕೃತಿ ಪತ್ರದ ಬಗ್ಗೆ ರೈತರೊಬ್ಬರು ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಪೋರ್ಟಲ್ನಲ್ಲಿ ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ ಹಣ ಪಾವತಿಯ ಹಂತಕ್ಕೆ ಬಂದಾಗ ಅಲ್ಲಿಗೇ ನಿಲ್ಲಿಸಿ ಪ್ರಿಂಟ್ ನೀಡಲಾಗಿದೆ. ಇದನ್ನೇ ರಸೀದಿ ಎಂದು ನಂಬಿರುವು ರೈತರು ತಮ್ಮ ಬಳಿ ಇಟ್ಟುಕೊಂಡಿದ್ದರು.
‘ಕಳೆದ ವರ್ಷ ಕಂತು ಪಾವತಿಸಿದ್ದ ರೈತರು ತಮ್ಮ ಮನೆಯಲ್ಲಿದ್ದ ಸ್ವೀಕೃತಿ ಪತ್ರ ಪರಿಶೀಲಿಸಿದಾಗ ಎಲ್ಲವೂ ಇದೇ ರೀತಿ ಇರುವುದು ಗೊತ್ತಾಯಿತು. ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ವಿಮೆ ವಿಚಾರಿಸಿದಾಗ ಬಹುತೇಕ ಅರ್ಜಿ ಅರ್ಧದಲ್ಲೇ ನಿಲ್ಲಿಸಲಾಗಿದ್ದು, ಸಲ್ಲಿಕೆಯೇ(ಸಬ್ಮಿಟ್) ಆಗಿಲ್ಲ ಎಂಬುದು ಗೊತ್ತಾಯಿತು’ ಎಂದು ನಂದೀಪುರದ ಸಂದೀಪ್ ಹೇಳಿದರು.
‘ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಗ್ರಾಮಗಳಿವೆ. ತೋಟಗಾರಿಕೆ ಇಲಾಖೆ ನೀಡಿರುವ ಪಟ್ಟಿಯಲ್ಲಿ ಗ್ರಾಮ ಒನ್ ಕೂಡ ಇದ್ದು, ಎಲ್ಲರೂ ಇದೇ ಗ್ರಾಮ ಒನ್ ಕೇಂದ್ರದ ಮೂಲಕ ನೋಂದಣಿ ಮಾಡಿಸಿದ್ದೆವು. ₹8 ಲಕ್ಷದಿಂದ ₹10 ಲಕ್ಷದ ತನಕ ರೈತರ ಹಣ ವಂಚನೆಯಾಗಿದೆ. ನಮಗೆ ಬರಬೇಕಿದ್ದ ವಿಮಾ ಮೊತ್ತ ₹1 ಕೋಟಿಗೂ ಅಧಿಕವಾಗಿದ್ದು, ಅದು ಈಗ ರೈತರಿಗೆ ಸಿಗದಂತಾಗಿದೆ’ ಎಂದರು.
‘ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿಕಾಸ್ ಈ ರೀತಿಯ ಹಲವು ವಂಚನೆಗಳನ್ನು ಮಾಡಿದ್ದು, ವಿಷಯ ಬಯಲಾದ ಬಳಿಕ ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಗ್ರಾಮಸ್ಥ ಮಲ್ಲೇಶ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.