ರವೀಶ್ ಕ್ಯಾತನಬೀಡು
ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಹೊಗಳಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಟೀಕಿಸಿದರು.
ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ 2001ರವರೆಗೆ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಹಿಂದೂ ಧರ್ಮವನ್ನು ರಾಜಕೀಯ ಆಯುಧ ಮಾಡಿಕೊಂಡು ಭಾರತೀಯರನ್ನು ಒಡೆದಾಳಿರುವ ಆರ್ಎಸ್ಎಸ್ ಬಗ್ಗೆ ಪ್ರಧಾನಿ ಈಗ ಹೊಗಳುತ್ತಿರುವುದು ಹಲವು ಸಂದೇಹಗಳನ್ನು ಹುಟ್ಟಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
ಮುಂದಿನ ತಿಂಗಳಿಗೆ ಅವರಿಗೆ 75 ವರ್ಷ ತುಂಬಲಿದೆ. ಹೀಗಾಗಿ ಪ್ರಾಧಾನಿ ಹುದ್ದೆ ಉಳಿಸಿಕೊಳ್ಳುವ ತವಕ ಅವರಿಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದಾಗ ರಾಜಕೀಯದಿಂದ ಕೆಳಗಿಳಿಸಿದ ಸೂತ್ರ ತಮಗೂ ಅನ್ವಯಿಸಬಹುದು ಎಂಬ ಭಯ ಪ್ರಧಾನಿಗೆ ಕಾಡುತ್ತಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಕಶ್ಯಪ್ ನಂದನ್ ಮಾತನಾಡಿ, ‘ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗಳಿಗೆ ಈವರೆಗೂ ಚುನಾವಣಾ ಆಯೋಗ ಉತ್ತರಿಸಿಲ್ಲ. ಆದರೆ, ರಾಹುಲ್ಗೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ತಾಕೀತು ಮಾಡುತ್ತಿದೆ. ಕೇರಳದಲ್ಲಿ ಮತ ಕಳವು ನಡೆದಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ಆರೋಪಿಸಿದಾಗ ಅವರನ್ನು ಏಕೆ ಪ್ರಮಾಣ ಪತ್ರ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಹಿರೇಮಗಳೂರು ರಾಮಚಂದ್ರ, ತನೋಜ್ಕುಮಾರ್, ವಿಜಯಕುಮಾರ್, ಸಂತೋಷ್ ಲಕ್ಯಾ, ನಿಜಗುಣಮೂರ್ತಿ, ತ್ರಿಭುವನ್, ರವೀಶ್ ಜಾನ್ಸಾಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.