ಬಾಳೆಹೊನ್ನೂರು: ಕೊರೊನಾ ವೈರಸ್ ಸೋಂಕು ಕುರಿತು ಜನರು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿನ ಠಾಣೆಯ ಪೊಲೀಸರು ಜೇಸಿ ವೃತ್ತದಲ್ಲಿ ಭಾನುವಾರ ಬಣ್ಣ ಹಚ್ಚಿ ಬೀದಿ ನಾಟಕ ಪ್ರದರ್ಶಿಸಿದರು.
ಸಹಾಯಕ ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ನಾಟಕ ಬರೆದು ನಿರ್ದೇಶಿಸಿ, ಕೊರೊನಾ ಸೇನಾಧಿಪತಿಯಾಗಿ ಬಣ್ಣ ಹಚ್ಚಿ ಪಾತ್ರ ನಿರ್ವಹಿಸಿದರು. ಉಳಿದಂತೆ ಕೊರೊನಾ ಕಿಂಕರನಾಗಿ ಆಕ್ಬರ್ ಆಲಿ, ಕೊರೊನಾ ಚಕ್ರಾಧಿಪತಿಯಾಗಿ ಬಿ.ಎಲ್.ಗೌಡ, ಕೊರೊನಾ ಮಹಾಮಂತ್ರಿಯಾಗಿ ನಾಗರಾಜ ಅಭಿನಯಿಸಿದರು.
ಕೊರೊನಾ ಬಾರದಂತೆ ಜನತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಪೊಲೀಸರು ಕೈಗೊಂಡ ತಪಾಸಣಾ ಕೇಂದ್ರಗಳು, ಸ್ವಚ್ಛತೆ, ಅಂತರ ಕಾಪಾಡುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳ ಕುರಿತು ನಾಟಕದಲ್ಲಿ ವಿವರವಾಗಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ನೀತು ಆರ್.ಗುಡೆ, ‘ಕೊರೊನಾ ವೈರಸ್ ಸೋಂಕು ಹರಡದಂತೆ ಸಂಘ ಸಂಸ್ಥೆಗಳು, ಜನರ ಸಹಕಾರದಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ. ಸಾರ್ವಜನಿಕರು ಸಾಕ್ಷಿ ಪ್ರಜ್ಞೆಯೊಂದಿಗೆ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಮೂಲಕ ರೋಗ ಹರಡದಂತೆ ತಡೆಯಬೇಕು. ಎಲ್ಲೆಡೆ ಸಾಮಾಜಿಕ ಅಂತರವನ್ನು ಪಾಲಿಸುವುದು ಕಡ್ಡಾಯವಾಗಿದೆ’ ಎಂದರು.
ನಾಟಕದ ನಂತರ ಎಲ್ಲಾ ಪಾತ್ರದಾರಿಗಳು, ಪೊಲೀಸರು ಬೈಕ್ ಹಾಗೂ ಕಾರಿನಲ್ಲಿ ಇಡೀ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪೊಲೀಸ್ ಇಲಾಖೆ ವತಿಯಿಂದ ಉಚಿತವಾಗಿ ಮುಖಗವಸನ್ನು ವಿತರಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಎಸ್.ಸುರೇಶ್, ಚೈತನ್ಯ ವೆಂಕಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.