ಮೂಡಿಗೆರೆ: ಮಲೆನಾಡಿನಲ್ಲಿ ನಿರ್ಮಾಣವಾಗಿರುವ ಗುಂಡಿ ರಸ್ತೆಯನ್ನು ನೋಡಲು ಯಮ, ಚಿತ್ರಗುಪ್ತ ಭೂಲೋಕಕ್ಕೆ ಬಂದಿರುವ ಅಣಕು ಪ್ರದರ್ಶನ ತಾಲ್ಲೂಕಿನ ನಿಡುವಾಳೆಯಲ್ಲಿ ಸೋಮವಾರ ನಡೆಯಿತು.
ಮಲೆನಾಡಿನಲ್ಲಿ ಸುರಿದ ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದ್ದು, ಇದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದರ ವಿರುದ್ಧ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಕಲಾವಿದ ರಮೇಶ್ ಯಾದವ್ ಅವರು ಯಮ ಹಾಗೂ ಚಿತ್ರಗುಪ್ತನ ವೇಷ ಧರಿಸಿ ರಸ್ತೆಗೆ ಇಳಿದಿದ್ದರು.
ನಿಡುವಾಳೆ ಸುತ್ತಮುತ್ತ ರಸ್ತೆಗಳಲ್ಲಿ ಸಂಚರಿಸಿ ಗುಂಡಿಗಳ ಬಗ್ಗೆ ಗಮನ ಸೆಳೆದರು. ಗುಂಡಿಗಳ ಅಳತೆ ದಾಖಲುಮಾಡಿಕೊಂಡರು. ಪಾಪ–ಪುಣ್ಯಗಳ ಬಗ್ಗೆ ಲೆಕ್ಕ ಬರೆದುಕೊಂಡರು.
‘ಯಮ ಹಾಗೂ ಚಿತ್ರಗುಪ್ತನ ವೇಷ ಕಂಡ ವಾಹನ ಸವಾರರು ಗುಂಡಿ ರಸ್ತೆಯಿಂದ ಆಗುತ್ತಿರುವ ಗೋಳಿನ ಅಳಲು ತೋಡಿಕೊಂಡಿರು. ಅವರಿಗೆ ಗುಂಡಿ ರಸ್ತೆಯಲ್ಲಿ ನಿಧಾನವಾಗಿ ಸಾಗಬೇಕು. ಈ ರಸ್ತೆಯಲ್ಲಿ ಯಮ ಮತ್ತು ಚಿತ್ರಗುಪ್ತ ಸದಾ ಇರುತ್ತೇವೆ’ ಎಂದು ತಿಳಿ ಹೇಳಿದರು.
ಅಲ್ಲದೇ ಮದ್ಯಪಾನ ಮಾಡಿ ವಾಹನ ಚಲನೆ ಮಾಡದಂತೆ ಸವಾರರಿಗೆ ಜಾಗೃತಿ ಮೂಡಿಸಿದರು. ಬಳಿಕ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಿದರು. ಯುವಕರ ವಿಭಿನ್ನ ಜಾಗೃತಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.