ADVERTISEMENT

89 ಲಕ್ಷ ಮೌಲ್ಯದ ಸ್ವತ್ತು ವಾರುಸುದಾರರಿಗೆ ವಾಪಸ್‌

‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 5:05 IST
Last Updated 10 ನವೆಂಬರ್ 2021, 5:05 IST
ಚಿಕ್ಕಮಗಳೂರಿನ ನಗರದ ಡಿಎಆರ್‌ ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮದಲ್ಲಿ ಎಸ್ಪಿ ಅಕ್ಷಯ್‌ ಅವರು ವಾರಸುದಾರರಿಗೆ ಸ್ವತ್ತು ನೀಡಿದರು.
ಚಿಕ್ಕಮಗಳೂರಿನ ನಗರದ ಡಿಎಆರ್‌ ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮದಲ್ಲಿ ಎಸ್ಪಿ ಅಕ್ಷಯ್‌ ಅವರು ವಾರಸುದಾರರಿಗೆ ಸ್ವತ್ತು ನೀಡಿದರು.   

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 77 ಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಂದ ವಶಪಡಿಸಿಕೊಂಡ

ನಗ, ನಗದು, ವಾಹನ, ವಸ್ತುಗಳನ್ನು ( ₹ 89 ಲಕ್ಷ ಮೌಲ್ಯ) ವಾರಸುದಾರರಿಗೆ ನೀಡಲಾಯಿತು.

ನಗರದ ಡಿಎಆರ್‌ ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ (ವಶಪಡಿಸಿಕೊಂಡ ಸ್ವತ್ತು ವಾರಸುದಾರರಿಗೆ ಮರಳಿ ನೀಡುವುದು) ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ನಗ, ನಗದು, ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದರು.

ADVERTISEMENT

42 ದ್ವಿಚಕ್ರ ವಾಹನ, ಎರಡು ತ್ರಿಚಕ್ರ ವಾಹನ, ಒಂದು ನಾಲ್ಕು ಚಕ್ರವಾಹನ, 900 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣ– 12 ಕೆ.ಜಿ, ಏಳು ಕ್ವಿಂಟಲ್‌ ಅಡಿಕೆ, ಎರಡು ಮೊಬೈಲ್‌ ಫೋನ್‌, ಎರಡು ಲ್ಯಾಪ್‌ಟಾಪ್‌, ಒಂದು ಕಂ‍ಪ್ಯೂಟರ್‌, ಒಂದು ಟ್ಯಾಬ್ಲೆಟ್‌, ಎರಡು ಕಲ್ಟಿವೇಟರ್‌, ಎರಡು ಜನರೇಟರ್‌, ಒಂದು ಚಕ್ಕಡಿ, 16 ಪ್ರಾಣಿಗಳು, ₹ 7.17 ಲಕ್ಷ ನಗದನ್ನು ವಾರಸುದಾರರಿಗೆ ನೀಡಲಾಯಿತು.

ಠಾಣೆವಾರು ಚಿಕ್ಕಮಗಳೂರು ನಗರ– 16, ಬಸವನಹಳ್ಳಿ ಮತ್ತು ಗ್ರಾಮಾಂತರ ತಲಾ ಎರಡು, ಅಜ್ಜಂಪುರ, ಬೀರೂರು ತಲಾ ಒಂಬತ್ತು, ಕಡೂರು ಏಳು, ತರೀಕೆರೆ ಆರು, ಯಗಟಿ ಐದು, ಲಕ್ಕವಳ್ಳಿ, ಲಿಂಗದಗಹಳ್ಳಿ ತಲಾ ನಾಲ್ಕು, ಮೂಡಿಗೆರೆ, ಬಾಳೆಹೊನ್ನೂರು, ಎನ್‌.ಆರ್‌.ಪುರ ತಲಾ ಎರಡು , ಆಲ್ದೂರು, ಮಲ್ಲಂದೂರು, ಬಾಳೂರು, ಬಣಕಲ್‌, ಗೋಣಿಬೀಡು, ಪಂಚನಹಳ್ಳಿ ಹಾಗೂ ಕೊಪ್ಪ ಠಾಣೆ ವ್ಯಾಪ್ತಿಯ ತಲಾ ಒಂದು ಒಟ್ಟು 77 ಪ್ರಕರಣಗಳನ್ನು ಪೊಲೀಸರು ಭೇದಿಸಿ ಆರೋಪಿಗಳಿಂದ ಮಾಲು ವಶಪಡಿಸಿಕೊಂಡಿದ್ದರು.

ನಗ, ನಗದು, ವಸ್ತುಗಳು ವಾಪಸ್‌ ಸಿಕ್ಕಿದ್ದಕ್ಕೆ ವಾರಸುದಾರರು ಸಂತಸ ವ್ಯಕ್ತಪಡಿಸಿದರು. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾತ್ರಿ ಗಸ್ತು ಹೆಚ್ಚು ಸಕ್ರಿಯಕ್ಕೆ ಕ್ರಮ’

ಕಳವು ಪ್ರಕರಣಗಳ ಪತ್ತೆ ಜೊತೆಗೆ ಕಳ್ಳತನ ನಿಯಂತ್ರಣ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ವಾರ್ಡ್‌ಗಳಲ್ಲಿ ಸಭೆ ನಡೆಸಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಪ್ರೇರೇಪಿಸುತ್ತಿದ್ದೇವೆ. ಹಳ್ಳಿಗಳಲ್ಲಿ ದೇಗುಲ ಸಮಿತಿಯವರ ಜತೆ ಮಾತುಕತೆ ನಡೆಸಿ ದೇಗುಲಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸುವಂತೆ ತಿಳಿಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದರು.

ಕಡೂರು, ಸಖರಾಯಪಟ್ಟಣ ಭಾಗದಲ್ಲಿ 25ಕ್ಕೂ ಹೆಚ್ಚು ದೇಗುಲಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಕಡೆ ರಾತ್ರಿ ಗಸ್ತು ವ್ಯವಸ್ಥೆಯನ್ನು ಹೆಚ್ಚು ಸಕ್ರಿಯಗೊಳಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.