ಕೊಟ್ಟಿಗೆಹಾರ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಮಾಡಿ ವಿಕೃತಿ ಮೆರೆದ ಕೃತ್ಯ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಹೇಳಿದರು.
ಬಣಕಲ್ ಟೈಲರ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕರೆ ನೀಡಲಾಗಿದ್ದ ಬಂದ್ ಹಿನ್ನಲೆಯಲ್ಲಿ ಬಣಕಲ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಯಾವುದೇ ತಪ್ಪು ಮಾಡದ ಕನ್ಹಯ್ಯಲಾಲ್ ತಮ್ಮ ಪಾಡಿಗೆ ತಾವು ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಗ್ರಾಹಕರಾಗಿ ಬಂದ ಹಂತಕರು ಬಳಿಕ ಅವರ ಕುತ್ತಿಗೆಯನ್ನು ಸೀಳಿ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ವಿಕೃತಿ ಮೆರೆದಿದ್ದಾರೆ. ಇದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಹ ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದನ್ನು ಇಡೀ ದೇಶವೇ ಖಂಡಿಸಿದೆ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಘು ಜೆ.ಎಸ್. ಮಾತನಾಡಿ, ‘ದೇಶದಲ್ಲಿ ಹಿಂದೂ ಯುವಕರ ಹತ್ಯೆಯಾದರೆ ಕಾಂಗ್ರೆಸ್ ತುಟಿ ಬಿಚ್ಚಲ್ಲ. ಕಾಂಗ್ರೆಸ್ ಬೆಂಬಲಿತ ಬುದ್ಧಿಜೀವಿಗಳು ದೇಶಕ್ಕೆ ಮಾರಕವಾಗಿದ್ದಾರೆ. ಭಾವೈಕ್ಯ ಮನೋಭಾವದಿಂದ ಇರುವವರಿಗೆ ಸಹಿಷ್ಣುತೆ ಪಾಠ ಹೇಳುತ್ತಾರೆ. ಕ್ರೂರತೆ, ಮತಾಂಧತೆ ಬೆಳೆಸಿಕೊಂಡವರಿಗೆ ಏನೂ ಹೇಳುವುದಿಲ್ಲ’ ಎಂದು ಆರೋಪಿಸಿದರು.
ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ಟೈಲರ್ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಇದ್ದರು. ಬಣಕಲ್ನ ಹಿಂದುತ್ವಪರ ಸಂಘಟನೆಗಳ ಕಾರ್ಯಕರ್ತರು, ಆಟೋ ಚಾಲಕರ ಸಂಘ, ಗ್ಯಾರೇಜ್ ಸಂಘ, ವರ್ತಕರ ಸಂಘದವರು ಬಂದ್ಗೆ ಬೆಂಬಲ ಸೂಚಿಸಿದರು. ಬಣಕಲ್ ಮತ್ತು ಕೊಟ್ಟಿಗೆಹಾರದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಣಕಲ್ನಲ್ಲಿ ಸಂತೆಯೂ ನಡೆಯಲಿಲ್ಲ. ವಾಹನ ಸಂಚಾರ ಎಂದಿನಂತೆ ಇತ್ತು. ಬ್ಯಾಂಕ್, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ತೆರೆದಿದ್ದವು.
ಟೈಲರ್ಸ್ ಸಂಘದ ವಲಯ ಸಮಿತಿ ಅಧ್ಯಕ್ಷ ಎ.ಎಸ್.ಪುಟ್ಟಸ್ವಾಮಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಸ್.ರಘು, ಬಜರಂಗದಳ ತಾಲ್ಲೂಕು ಸಂಚಾಲಕ ವಿನಯ್ ಎಸ್.ಶೆಟ್ಟಿ, ಬಣಕಲ್ ಹೋಬಳಿ ಸಂಚಾಲಕ ಅಭಿಷೇಕ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಟೈಲರ್ ಸಂಘದ ಕಾರ್ಯದರ್ಶಿ ಶಂಕರ್ ಟೈಲರ್, ಉಪಾಧ್ಯಕ್ಷೆ ಶೀಲಾ, ಗೌರವಾಧ್ಯಕ್ಷ ಶಿವೇಗೌಡ, ಬಿಜೆಪಿ ಮುಖಂಡರಾದ ಬಿ.ಎಂ.ಭರತ್, ಬಿ.ಎಸ್.ವಿಕ್ರಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.