ADVERTISEMENT

ಶಾಸಕರ ವಿರುದ್ಧ ಪ್ರತಿಭಟನೆ ನಾಳೆ: ಮಣಿಕಂಠನ್

ಕ್ಷೇತ್ರದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:55 IST
Last Updated 3 ಜುಲೈ 2022, 1:55 IST
ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಜು.4 ರಂದು ಕೊಪ್ಪದಲ್ಲಿ ನಡೆಯಲಿರುವ ಪ್ರತಿಭಟನೆಯ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಜು.4 ರಂದು ಕೊಪ್ಪದಲ್ಲಿ ನಡೆಯಲಿರುವ ಪ್ರತಿಭಟನೆಯ ಕರಪತ್ರವನ್ನು ಬಿಡುಗಡೆಗೊಳಿಸಿದರು.   

ಜಯಪುರ (ಬಾಳೆಹೊನ್ನೂರು): ‘ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡರು ರೈತ ವಿರೋಧಿ ನೀತಿಯನ್ನು ಅನುಸರಿ ಸುವ ಜತೆಗೆ ಸ್ವಜನಪಕ್ಷಪಾತ ತೋರುತ್ತಿ ದ್ದಾರೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆಡಳಿತ ಸಂಪೂರ್ಣ ಹದಗೆಟ್ಟಿದೆ. ಅದನ್ನು ಖಂಡಿಸಿ ಸೋಮವಾರ ಕೊಪ್ಪ ತಾಲ್ಲೂಕು ಕಚೇರಿ ಬಳಿ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರು ಕ್ಷೇತ್ರದಲ್ಲಿ ನಿಯಮಿತ ವಾಗಿ ಕೆಡಿಪಿ ಸಭೆ ನಡೆಸಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಕಾರಣ ಆಡಳಿತ ಸೊರಗಿದೆ. ಅಲಗೇಶ್ವರ, ಹೊಸೂರು ರಸ್ತೆಗೆ ಶಾಸಕರು ಇದೂವರೆಗೆ ಯಾವುದೇ ಅನುದಾನ ತಂದಿಲ್ಲ. ಜಯಪುರದ ಮುಖ್ಯರಸ್ತೆ ವಿಸ್ತರಣೆ ಮಾಡುವಂತೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಣಯ ಕೈಗೊಂಡು ಶಾಸಕರಿಗೆ ಮನವಿ ಮಾಡಿದ್ದರೂ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ಕೊಪ್ಪದ ಟಿಎಪಿಸಿಎಸ್ ಅಧ್ಯಕ್ಷ ರಾಘವೇಂದ್ರ ಕೆಸವೆ ಮಾತನಾಡಿ, ‘ಜನರಿಗೆ ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಹಕ್ಕುಪತ್ರ ಪಡೆದವರಿಗೆ ಪಹಣಿ ಆಗಿಲ್ಲ. ಶಾಸಕರ ಹಿಂಬಾಲಕರಿಗೆ ಮಾತ್ರ
ಎಲ್ಲಾ ಕೆಲಸಗಳೂ ಸೂಸೂತ್ರವಾಗಿ ಆಗುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬದಲು ಸಭೆಗಳಲ್ಲಿ ಅಧಿಕಾರಿಗಳ ಪರವಾಗಿ ಶಾಸಕರು ಮಾತನಾಡುವ ಮೂಲಕ ತಮ್ಮ ನೈಜ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಹೋಬಳಿ ಮುಖಂಡ ಹೆಗ್ಗದ್ದೆ ಮಂಜುನಾಥ್ ಮಾತನಾಡಿ, ‘ಕೆಲವರಿಗೆ ಮಾತ್ರ ಶಾಸಕರು ಸೀಮಿತರಾಗಿದ್ದಾರೆ. ಹಿಂಬಾಲಕರಿಗೆ ಮಾತ್ರ ಕಾಮಗಾರಿ ಮಾಡಿಕೊಳ್ಳುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದಾರೆ. ಜಯಪುರದ ಸಮುದಾಯ ಭವನಕ್ಕೆ ಜೀವರಾಜ್ ಸರ್ಕಾರದಿಂದ ತಂದ ಅನುದಾನವನ್ನು ಕ್ಷೇತ್ರ ಬಿಟ್ಟು ಬೇರೆ ಕಡೆಗೆ ವರ್ಗಾಯಿಸುವ ಮೂಲಕ ತಾರತಮ್ಯ ಎಸಗಿದ್ದಾರೆ. ಕ್ಷೇತ್ರದಲ್ಲಿ ಆಡಳಿತ ಸಂಪೂರ್ಣ ಕುಸಿತಗೊಂಡಿದೆ’ ಎಂದು ದೂರಿದರು.

ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಪುನೀತ್, ಸದಸ್ಯರಾದ ಸಂಪತ್, ಶ್ರೀನಿವಾಸ್, ಕರುಣಾಕರ, ಪ್ರವೀಣ್ ಶೆಟ್ಟಿ, ಸ್ಥಾನೀಯ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಕಾರ್ಯದರ್ಶಿ ಸುಧಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.