ಚಿಕ್ಕಮಗಳೂರು: ಮುಂಗಾರು ಈ ಬಾರಿ ಉತ್ತಮವಾಗಿದ್ದು, ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ. ಜುಲೈ ಅಂತ್ಯ ಮತ್ತು ಆಗಸ್ಟ್ನಲ್ಲಿ ಇನ್ನೂ ಜೋರಾಗುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಅಪಾಯ ಸಂಭವಿಸಬಹುದಾದ 158 ಪ್ರದೇಶಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತು ಮಾಡಿದೆ.
ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿದ್ದು, ಸಿಡಿಲು ಬಡಿದು ಇಬ್ಬರು ಮತ್ತು ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಒಂದು ಮನೆ ಸಂಪೂರ್ಣ ಬಿದ್ದಿದ್ದು, 49 ಮನೆಗಳಿಗೆ ಭಾರಿ ಹಾನಿಯಾಗಿದೆ. 70 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
2019ರಲ್ಲಿ ಸಂಭವಿಸಿದ ಭೂಕುಸಿತದಿಂದ ಇಡೀ ಮಲೆನಾಡು ತತ್ತರಗೊಂಡಿತ್ತು. ಆಗ ನೆಲೆ ಕಳೆದುಕೊಂಡವರು ಪುನರ್ವಸತಿಗೆ ಇನ್ನೂ ತಡಕಾಡುತ್ತಿದ್ದಾರೆ. ಆದ್ದರಿಂದ ಜೋರು ಮಳೆ ಬಂದರೆ ಜನ ಭಯಪಡುವ ಸ್ಥಿತಿ ಇದೆ.
ಜುಲೈ ಅಂತ್ಯ ಮತ್ತು ಆಗಸ್ಟ್ನಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರವಾಹ, ಗುಡ್ಡ ಕುಸಿತ ರೀತಿಯ ಅಪಾಯ ಸಂಭವಿಸಬಹುದಾದ ಪ್ರದೇಶಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತು ಮಾಡಿ ನಿಗಾ ವಹಿಸಿದೆ. ಶೃಂಗೇರಿ ತಾಲ್ಲೂಕಿನಲ್ಲೇ ಅತಿ ಹೆಚ್ಚು 87 ಪ್ರದೇಶಗಳನ್ನು ಗುರುತಿಸಿದ್ದು, ಎನ್.ಆರ್.ಪುರ ತಾಲ್ಲೂಕಿನಲ್ಲಿ 21 ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 17 ಪ್ರದೇಶಗಳನ್ನು ಗುರುತಿಸಲಾಗಿದೆ.
ಜಿಲ್ಲಾಡಳಿತ ಕೂಡ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಪ್ರದೇಶಗಳನ್ನು ಗುರುತಿಸಿರುವ ಅಧಿಕಾರಿಗಳು ಸಂದರ್ಭ ಬಂದರೆ ಜನರನ್ನು ಸ್ಥಳಾಂತರ ಮಾಡಲು ಸುರಕ್ಷಿತ 77 ಜಾಗಗಳನ್ನೂ ಗುರುತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.