ADVERTISEMENT

ಗುರು ಅಜ್ಞಾನ ನಿವಾರಕ; ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:10 IST
Last Updated 25 ಜುಲೈ 2021, 3:10 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮ ಅಂಗವಾಗಿ ರಂಭಾಪುರಿ ಸ್ವಾಮೀಜಿಗಳ ಅಷ್ಟೋತ್ತರ ಸಹಿತ ಪಾದಪೂಜಾ ನೆರವೇರಿತು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮ ಅಂಗವಾಗಿ ರಂಭಾಪುರಿ ಸ್ವಾಮೀಜಿಗಳ ಅಷ್ಟೋತ್ತರ ಸಹಿತ ಪಾದಪೂಜಾ ನೆರವೇರಿತು.   

ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ‘ಗು’ ಎಂದರೆ ಅಜ್ಞಾನ. ‘ರು’ ಎಂದರೆ ನಿವಾರಕ ಎಂದರ್ಥ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೋಧಿಸುವಾತನೇ ನಿಜವಾದ ಗುರು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ‘ಗುರು ಪೂರ್ಣಿಮಾ’ ಸಮಾ ರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಸಕಲ ಜೀವ ರಾಶಿಗಳಿಗೆ ಲೇಸನ್ನೇ ಬಯಸುವ ಗುರು ಕರುಣಾಸಾಗರ. ಅಧ್ಯಾತ್ಮ ಜ್ಞಾನದ ಸಿರಿ ಸಂಪದವನ್ನಿತ್ತ ಗುರುವನ್ನು ಮರೆಯಲಾಗದು. ಆದ್ದರಿಂದಲೇ ‘ಆಚಾರ್ಯ ದೇವೋಭವ’ ಎಂದು ಶಾಸ್ತ್ರ ಸಾರಿ ಸಾರಿ ಹೇಳಿದೆ’ ಎಂದರು.

‘ಹೂವಿಗೂ ಸೂರ್ಯನಿಗೂ ಯಾವ ಸಂಬಂಧ ಇರುವುದೋ ಅದೇ ಸಂಬಂಧ ಗುರುವಿಗೂ ಶಿಷ್ಯನಿಗೂ ಇದೆ ಎಂಬುದನ್ನು ರೇಣುಕ ಗೀತೆ ಸ್ಪಷ್ಟವಾಗಿ ನಿರೂಪಿಸಿದೆ. ಭೌತಿಕ ಸಂಬಂಧಗಳು ಕಾಲಾಂತರದಲ್ಲಿ ಸಡಿಲಗೊಳ್ಳಬಹುದು. ಆದರೆ, ಗುರು ಶಿಷ್ಯರ ಸಂಬಂಧ ಅವಿನಾಭಾವವಾದುದು. ಗುರುವಿನಿಂದ ಅಮರ ಆಧ್ಯಾತ್ಮದ ಸಿರಿ ದಿವ್ಯ ಜೀವನ ಪ್ರಾಪ್ತವಾಗುವುದು. ಗುರು ಆಧ್ಯಾತ್ಮ ಲೋಕದ ಅನಭಿಷಕ್ತ ಚಕ್ರವರ್ತಿ. ಗುರು ದೇವರ ಸ್ವರೂಪವೆಂಬ ನಂಬಿಕೆಯುಂಟು ಗುರು ಬ್ರಹ್ಮ ವಿಷ್ಣು ಮವೇಶ್ವರ ಆಗಬಲ್ಲ. ತ್ರಿಮೂರ್ತಿಗಳ ಸಂಗಮ ಶಕ್ತಿ ಗುರುವಿನಲ್ಲಿದೆ’ ಎಂದರು.

ADVERTISEMENT

ಗುರು ಪೂರ್ಣಿಮಾ ಅಂಗವಾಗಿ ರಂಭಾಪುರಿ ಸ್ವಾಮೀಜಿಗಳ ಅಷ್ಟೋತ್ತರ ಸಹಿತ ಪಾದಪೂಜೆ ನೆರವೇರಿತು. ಗುರು ಪೌರ್ಣಿಮೆ ನಿಮಿತ್ತ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ನೆರವೇರಿತು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿ, ಸಂತೆಕೋಡಿಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿ, ಮುಳ್ಳಹಳ್ಳಿ ಗುರುಪಾದ ಶಿವಾಚಾರ್ಯ ಸ್ವಾಮಿ, ಹುಮನಾಬಾದ ಹಿರೇಮಠದ ರೇಣುಕ ವೀರಗಂಗಾಧರ ಶಿವಾಚಾರ್ಯ ಸ್ವಾಮಿ, ದಾವಣಗೆರೆ ಚನ್ನಬಸಯ್ಯ, ಚಿರಸ್ತಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಬೆಂಗಳೂರಿನ ಉದ್ಯಮಿ ಬಸವರಾಜ, ಉದಯ, ಬಾಳಯ್ಯ ಇಂಡಿಮಠ, ಚಂದ್ರು, ನಂದೀಶ, ನಾಂದೇಡ ವಿನಾಯಕ, ಕೊಟ್ರೇಶ. ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.