
ತರೀಕೆರೆ: ಹುಣಸಘಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ₹ 1.20 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಮತ್ತು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಣಸಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹುಣಸಘಟ್ಟ ನವನಗರ-1, ಹುಣಸಘಟ್ಟ ನವನಗರ-2, ಹುಣಸಘಟ್ಟ ನವನಗರ-3, ನರಸೀಪುರ ನವನಗರ, ಹೊಸಳ್ಳಿತಾಂಡ್ಯದ ಸಿದ್ದರಾಮಪುರ ಸೇರಿ 5 ಕಂದಾಯ ಉಪ ಗ್ರಾಮಗಳನ್ನು ರಚಿಸಲಾಗಿದ್ದು, ಸದ್ಯದಲ್ಲೇ ಇಲ್ಲಿ ವಾಸಿಸುತ್ತಿರುವ 605 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ತಾ.ಪಂ. ಇಒ ಆರ್.ದೇವೇಂದ್ರಪ್ಪ ಮಾತನಾಡಿ, ತರೀಕೆರೆ ತಾಲ್ಲೂಕಿನಾದ್ಯಂತ ಬಹುತೇಕ ಎಲ್ಲ ಗ್ರಾ.ಪಂ.ಗಳಿಗೆ ಸ್ವಂತ ಹೊಸ ಕಟ್ಟಡಗಳಿವೆ. ಉಳಿದಿರುವ ಮೂರ್ನಾಲ್ಕು ಗ್ರಾ.ಪಂ.ಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ 6 ತಿಂಗಳಲ್ಲಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಹುಣಸಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹು ದಿನಗಳ ಕನಸಾಗಿದ್ದ ಕಂದಾಯ ಉಪ ಗ್ರಾಮಗಳ ರಚನೆ ಈಡೇರಿದೆ ಎಂದು ತಿಳಿಸಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹಲವು ಅರ್ಜಿಗಳು ಸಲ್ಲಿಕೆಯಾದವು.
ತಹಶೀಲ್ದಾರ್ ವಿಶ್ವಜಿತ ಮೆಹತಾ, ಗ್ರಾ.ಪಂ. ಅಧ್ಯಕ್ಷೆ ಇಂದ್ರಮ್ಮ, ಉಪಾಧ್ಯಕ್ಷ ಎಸ್.ರಮೇಶ್ನಾಯ್ಕ, ಸದಸ್ಯರಾದ ಎಚ್.ಆರ್.ಮಂಜುನಾಥ್, ಟಿ.ಜಿ.ಪ್ರಿಯಾಂಕ, ಎಂ.ದೇವೇಂದ್ರಪ್ಪ, ಎಚ್.ಆರ್.ರವಿಕುಮಾರ್, ಗಂಗಮ್ಮ, ಗೌರಮ್ಮ, ಎಚ್.ಶ್ರೀನಿವಾಸ್, ವಿನೋದಬಾಯಿ, ಎಚ್.ಎಸ್. ಚೇತನ್ಕುಮಾರ್, ಆರ್.ವೀಣಾ, ಪಿಡಿಒ ಕೆ.ಆರ್.ಚೇತನ್ಮ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.