ಕಳಸ: ಗಂಗನಕೊಡಿಗೆ ಸಮೀಪದ ಕುಂಬಳಡಿಕೆ ಪ್ರದೇಶದಲ್ಲಿ 3 ತಿಂಗಳಿಂದ ತಡೆಗೋಡೆಯೊಂದರ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರು ರಸ್ತೆ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ.
‘ಕುಂಬಳಡಿಕೆಯಿಂದ ಬರುವ ಹಳ್ಳಕ್ಕೆ ಮೋರಿ ನಿರ್ಮಿಸಿ ತಡೆಗೋಡೆ ಮಾಡಲು ₹ 5 ಲಕ್ಷ ವೆಚ್ಚದಲ್ಲಿ ಬೇಸಿಗೆಯಲ್ಲೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಈವರೆಗೂ ಕಾಮಗಾರಿ ಮುಗಿಸದೆ ರಸ್ತೆ ಸಂಪರ್ಕವನ್ನೂ ಕಲ್ಪಿಸಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆ ಸಂಪರ್ಕ ಇಲ್ಲದೆ ನಾವು ಈ ತಡೆಗೋಡೆಯ ಎರಡೂ ಬದಿಗೆ ಒಂದೊಂದು ವಾಹನ ಇಟ್ಟುಕೊಂಡು ಕಳಸಕ್ಕೆ ಹೋಗಿ ಬರುವ ಸ್ಥಿತಿ ಬಂದಿದೆ ಎಮದು ಕುಂಬಳಡಿಕೆಯ ಕೃಷಿಕ ರಾಘವೇಂದ್ರ ಬೇಸರದಿಂದ ಹೇಳುತ್ತಾರೆ.
ಈ ಕಾಮಗಾರಿಯ ಸಂಪೂರ್ಣ ವಿವರ ಇರುವ ಸ್ಥಳೀಯರಾದ ಸಂಜೀವ ಅವರನ್ನು ಕೇಳಿದಾಗ ಅವರು, ‘ಕಾವೇರಿ ನೀರಾವರಿ ನಿಗಮದಿಂದ ಇಲ್ಲಿ ಸೇತುವೆ ನಿರ್ಮಾಣಕ್ಕೆ ₹ 25 ಲಕ್ಷ ಬಿಡುಗಡೆ ಆಗಿತ್ತು. ಅದರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಉಳಿದ ₹ 5 ಲಕ್ಷದಲ್ಲಿ ಮೋರಿ, ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ’ ಎಂದರು.
‘3 ತಿಂಗಳಿಂದ ಗುತ್ತಿಗೆದಾರ ನಾಪತ್ತೆ ಆಗಿದ್ದಾರೆ. ಸಂಬಂಧಪಟ್ಟ ಎಂಜಿನಿಯರ್ ಕೂಡ ಕರೆ ಸ್ವೀಕರಿಸುವುದಿಲ್ಲ. ಇವರೆಡೂ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ರಸ್ತೆಗೆ ಮಣ್ಣು ಹಾಕಿ, ಜಲ್ಲಿ ಹಾಸಿ ಸಂಚಾರಕ್ಕೆ ಆಸ್ಪದ ಕೊಡಬೇಕು’ ಎಂದು ಸಂಜೀವ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.