ಕೊಪ್ಪ: ‘ಮನುಕುಲದ ಉಪಯೋಗಕ್ಕೆ ಬಾರದ ಶಿಕ್ಷಣ ಪದ್ಧತಿ ವ್ಯರ್ಥ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಪ್ರಬೋಧಿನಿ ಗುರುಕುಲದಲ್ಲಿ ಭಾನುವಾರ ನಡೆದ ಅರ್ಧಮಂಡಲೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯೆ, ಧನ ಮತ್ತು ಶಕ್ತಿಯನ್ನು ಸಾಧುಗಳು ಜ್ಞಾನಕ್ಕಾಗಿ, ದಾನಕ್ಕಾಗಿ ಹಾಗೂ ಇತರರ ರಕ್ಷಣೆಗಾಗಿ ಬಳಸಿಕೊಳ್ಳುತ್ತಾರೆ. ಈ ರೀತಿಯ ಶಿಕ್ಷಣ ಪ್ರಪಂಚಕ್ಕೆ ಬೇಕು. ಇಲ್ಲದಿದ್ದರೆ, ಯಾವ ವಿದ್ಯೆಯೂ ಉಪಯೋಗಕ್ಕೆ ಬಾರದೇ, ಕಲಹಗಳ ಸೃಷ್ಟಿಗೆ ಕಾರಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ವೇದ ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯ. ಇದು ಅತ್ಯಂತ ಕಠಿಣ ಸಂದರ್ಭದಲ್ಲೂ ಉಳಿದಿದೆ. ಹಿಂದೂ ಧರ್ಮದ ಆಧಾರದ ಮೇಲೆ ಗುರುಕುಲ ಶಿಕ್ಷಣದ ಮೂಲಕ ಪ್ರಪಂಚವನ್ನು ತಿದ್ದಿ, ಶಾಂತಿ ನೆಲೆಸುವಂತೆ ಮಾಡಲು ಸಂಕಲ್ಪ ಮಾಡಬೇಕು. ಜಗತ್ತು ನಮ್ಮ ಶಿಕ್ಷಣ ಪದ್ಧತಿಯನ್ನು ಕೇಳಿದಾಗ ನಾವು ಕೊಡಬೇಕು. ನಮ್ಮ ಶಿಕ್ಷಣ ಪದ್ಧತಿ ಸಮಾಜ ಆಶ್ರಿತವಾದದು, ರಾಜಾಶ್ರಿತವಲ್ಲ. ಆದ್ದರಿಂದ ಗುರುಕುಲದ ರಕ್ಷಣೆ ಸಮಾಜದ ಜವಾಬ್ದಾರಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.