ಬಾಳೆಹೊನ್ನೂರು: ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ₹ 70.40 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ ತಿಳಿಸಿದರು.
ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪಿಎಸಿಎಸ್ನ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಗಮೇಶ್ವರಪೇಟೆ ಪಿಎಸಿಎಸ್ ಕಳೆದ ಸಾಲಿನಲ್ಲಿ ₹ 189.26 ಕೋಟಿಗಳ ವಾರ್ಷಿಕ ವಹಿವಾಟನ್ನು ನಡೆಸಿ ₹70.40 ಲಕ್ಷದ ಲಾಭದಲ್ಲಿ ಮುನ್ನಡೆದಿದೆ. ಸಂಘದ ಷೇರುದಾರರಿಗೆ ಲಾಭಾಂಶದಲ್ಲಿ ಶೇ 8 ಡಿವಿಡೆಂಟ್ ನೀಡಲಾಗಿದೆ. ₹15.90 ಕೋಟಿ ಸಾಲವನ್ನು ರೈತರಿಗೆ ನೀಡಲಾಗಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 250 ಕೋಟಿ ವಾರ್ಷಿಕ ವಹಿವಾಟನ್ನು ಸಂಘವು ನಡೆಸಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ. ರೈತರಿಗೆ ಸಂಘದಲ್ಲಿ ಬಹುಪಯೋಗಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಪಡೆದು ರೈತರು ತಾವು ಆರ್ಥಿಕ ಸ್ವಾವಲಂಬಿ ಆಗುವುದರ ಜತೆಗೆ ಸಂಘವನ್ನು ಅಭಿವೃದ್ಧಿಯಲ್ಲಿ ಮುನ್ನಡೆಸಬೇಕು ಎಂದು ಮನವಿ ಮಾಡಿದರು.
ಸಂಘದ ಮುಖಾಂತರ 1,502 ಸದಸ್ಯರು ಸರ್ಕಾರದ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಸಂಘವು ಮುಂದಿನ ದಿನಗಳಲ್ಲಿ ಷೇರುದಾರರು, ರೈತರು ಹಾಗೂ ಗ್ರಾಹಕರಿಗೆ ವಿವಿಧ ಯೋಜನೆ, ಸೌಲಭ್ಯಗಳನ್ನು ಆರಂಭಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದೆ. ಸದಸ್ಯರ ಅನುಕೂಲಕ್ಕಾಗಿ ಈಗಾಗಲೇ ಸಂಘದಲ್ಲಿ ಛಾಪಾ ಕಾಗದ, ಪಹಣಿ ಮತ್ತು ಇಸಿ ವಿತರಣೆಯ ಸೌಲಭ್ಯವನ್ನು ಸಹ ಆರಂಭಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಯು.ಇ.ಜಯರಾಮ್, ನಿರ್ದೇಶಕರಾದ ಬಿ.ಎನ್.ಸೋಮೇಶ್ಗೌಡ, ಯು.ವಿ.ವಿನಯ್, ಡಿ.ಬಿ.ಚಂದ್ರಹಾಸ್, ಗೋಕುಲ್ ಎಸ್.ಸಾರಗೋಡು, ಎ.ಕೆ.ಸುಧಾಕರ, ಕೆ.ಎ.ಮಹಮ್ಮದ್, ಎಂ.ಎ.ಪಲ್ಲವಿ ಗಣೇಶ್, ಬಿ.ಎನ್.ಸುಚಿತ್ರ ಮಹೇಶ್, ಸುಂದರೇಶ್, ಬಿ.ಸಿ.ಕುಟ್ಟಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೆ.ಆರ್.ರಘು, ಸಂಘದ ಸಿಇಒ ಜಿ.ಬಾಲಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.